ಸೋಮವಾರಪೇಟೆ, ಜೂ. 11: ಕಾಫಿ ಎಸ್ಟೇಟ್‍ನಲ್ಲಿ ಬೆಳೆದಿದ್ದ ಬೆಲೆಬಾಳುವ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟಗೊಳಿಸಲು ಸಿದ್ಧಪಡಿಸುತ್ತಿದ್ದ ಸಂದರ್ಭ ಅರಣ್ಯಾಧಿಕಾರಿಗಳ ತಂಡ ಧಾಳಿ ನಡೆಸಿ, ಲಕ್ಷಾಂತರ ಮೌಲ್ಯದ ಮರಗಳೂ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಸಮೀಪದ ಯಡವಾರೆಯಲ್ಲಿ ನಡೆದಿದೆ.

ಅಕ್ರಮ ಮರಹನನದಲ್ಲಿ ತೊಡಗಿದ್ದ, ಯಡವಾರೆ ಗ್ರಾಮದ ಕಾಜೂರು ಎಸ್ಟೇಟ್‍ನಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ ಕಾಜೂರಿನ ಕೆ.ಜಿ. ಅರುಣ್, ಕೆದಕಲ್ ಗ್ರಾಮದ ಮುತ್ತಪ್ಪ ಮತ್ತು ರಾಮನ್ ಅವರುಗಳನ್ನು ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ನೇತೃತ್ವದ ತಂಡ ಬಂಧಿಸಿದೆ.

ಕಾಜೂರು ಎಸ್ಟೇಟ್‍ನ ಮಾಲೀಕ ಸೇತುರಾಮ್ ಚೆಟ್ಟಿಯಾರ್ ಅವರು ತಮಿಳುನಾಡಿನಲ್ಲಿ ನೆಲೆಸಿದ್ದು, ಯಡವಾರೆಯಲ್ಲಿರುವ ತೋಟವನ್ನು ವ್ಯವಸ್ಥಾಪಕ ಅರುಣ್ ನೋಡಿಕೊಳ್ಳುತ್ತಿದ್ದರು. ಈ ಸಮಯದಲ್ಲಿ ಮಾಲೀಕರ ಗಮನಕ್ಕೆ ಬಾರದಂತೆ ತೋಟದಲ್ಲಿ ಬೆಳೆದಿದ್ದ ಲಕ್ಷಾಂತರ ಮೌಲ್ಯದ ಬೀಟೆ, ಹಲಸು, ನಂದಿ ಮತ್ತು ತಡಸಲು ಜಾತೀಯ ಮರಗಳನ್ನು ಅಕ್ರಮವಾಗಿ ಕಡಿದು ನಾಟಾಗಳನ್ನಾಗಿ ಪರಿವರ್ತಿಸಿ ಸಾಗಾಟಗೊಳಿಸಲು ಯತ್ನಿಸುತ್ತಿದ್ದ ಸಂದರ್ಭ ಅರಣ್ಯಾಧಿಕಾರಿಗಳು ಧಾಳಿ ನಡೆಸಿದ್ದಾರೆ.

ತೋಟದ ಒಳಗೆ ನಿರ್ಮಿಸಲಾಗಿದ್ದ ‘ದಡೆ’ಯಲ್ಲಿ ಅನೇಕ ಮರಗಳನ್ನು ನಾಟಗಳನ್ನಾಗಿ ಪರಿವರ್ತಿಸಿ ಸಾಗಾಟಕ್ಕೆ ಸಿದ್ಧಪಡಿಸಲಾಗಿದ್ದು, ಅರಣ್ಯ ಇಲಾಖಾ ಸಿಬ್ಬಂದಿಗಳು 425 ಘನ ಮೀಟರ್ ಬೀಟೆ, 487 ಘ.ಮೀ. ಹಲಸು, 664 ಘ.ಮೀ. ನಂದಿ, 614 ಘ.ಮೀ. ತಡಸಲು ಮರದ ನಾಟಾಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂದಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ ನ್ಯಾಯಾಧೀಶರು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತೋಟದಲ್ಲಿ ಇನ್ನಷ್ಟು ಮರಗಳು ಕಳುವಾಗಿರುವ ಬಗ್ಗೆ ಅರಣ್ಯ ಇಲಾಖಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಮರ ಕಳ್ಳತನದ ಬಗ್ಗೆ ತೋಟದ ಮಾಲೀಕರ ಗಮನಕ್ಕೆ ತಂದಿದ್ದಾರೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್, ಫಾರೆಸ್ಟರ್‍ಗಳಾದ ಮನು, ಜಗದೀಶ್, ಅರಣ್ಯ ರಕ್ಷಕ ಯತೀಶ್, ಸಿಬ್ಬಂದಿಗಳಾದ ಪ್ರಸಾದ್, ವಿಜಯ್, ಮಂಜುನಾಥ್ ಅವರುಗಳು ಭಾಗವಹಿಸಿದ್ದರು.