ಮಡಿಕೇರಿ, ಜೂ. 11 : ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ಸ್ವಾಮೀ ವಿವೇಕಾನಂದರ ಚಿಕಾಗೋ ಉಪನ್ಯಾಸದ 125 ನೇ ವರ್ಷಾಚರಣೆಯ ಪ್ರಯುಕ್ತ ‘ಸಂಕಟಗಳ ಮಧ್ಯೆ ಯಶಸ್ಸಿನ ಸೂತ್ರಗಳು’ ಎಂಬ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರವು ನಗರದ ಕೂರ್ಗ್ ಇನ್ಸಿಟ್ಯೂಟ್ ಆಫ್ ಕಾಮರ್ಸ್ ಶ್ರೀ ನಿಕೇತನ್ ಸಭಾಂಗಣದಲ್ಲಿ ನಡೆಯಿತು.
ವೀರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕೊಡಗು ಪ್ರಕೃತಿ ವಿಕೋಪದ ನಂತರ ಜನತೆ ತೀರ ತತ್ತರಿಸಿದ್ದರು. ಆ ಸಮಯದಲ್ಲಿ ಶ್ರೀ ರಾಮಕೃಷ್ಣ ಶಾರದಾಶ್ರಮವು ಹಳ್ಳಿಗಳಿಗೆ ತೆರಳಿ ಸಂತ್ರಸ್ತರಿಗೆ ಮೂಲಭೂತವಾದ ಸೌಕರ್ಯಗಳನ್ನು ಒದಗಿಸಿ ಸ್ವಾವಲಂಬನೆಯ ಬದುಕನ್ನು ಸಾಗಿಸಲು ಸಂಸ್ಥೆಯ ಮೂಲಕ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ ಎಂದು ಅವರು ಶ್ಲಾಘಿಸಿದರು.
ಕಾರ್ಯಾಗಾರದ ಫಲಾನುಭವಿ ಗಳು ವೃತ್ತಿ ಶಿಕ್ಷಣವನ್ನು ಜವಾಬ್ದಾರಿ ಯುತವಾಗಿ ಕಲಿಯಬೇಕು, ಸ್ವ ಉದ್ಯೋಗವನ್ನು ಅವಲಂಭಿಸಿ ದಕ್ಷತೆಯಿಂದ ನಿಸ್ವಾರ್ಥ ಸೇವೆಯನ್ನು ಸಲ್ಲಿಸಬೇಕು ಆಗ ಮಾತ್ರ ಸೇವೆಗೆ ನಿಜವಾದ ಅರ್ಥ ಬರುತ್ತದೆ. ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ ಪ್ರತಿಯೊಬ್ಬರೂ ಕೂಡ ಶಿಕ್ಷಣವನ್ನು ಪಡೆಯಬೇಕು ಎಂದು ಅವರು ತಿಳಿಸಿದರು.
ಮಾನವೀಯ ಮೌಲ್ಯಗಳು ನಶಿಸಿ ಹೋಗುತ್ತಿದೆ ಆದ್ದರಿಂದ, ಸಮಾಜದ ಉನ್ನತಿಗಾಗಿ ಶ್ರಮಿಸಿದ ಹಲವಾರು ಮಹನೀಯರ ಜೀವನ ಸಂದೇಶಗಳನ್ನು ಹಾಗೂ ಸ್ವಾಮೀ ವಿವೇಕಾನಂದರ ತತ್ವ ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅನುಕರಣೆ ಮಾಡುವ ಮೂಲಕ ಸಮಾಜದ ಉನ್ನತಿಗಾಗಿ ದಕ್ಷತೆಯಿಂದ ಶ್ರಮಿಸಬೇಕಾಗಿದೆ ಎಂದು ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಬೋಧ ಸ್ವರೂಪಾನಂದ ಸ್ವಾಮೀಜಿ ಮಾತನಾಡಿ 92 ವರ್ಷಗಳ ಇತಿಹಾಸವಿರುವ ಈ ಮಠವು ಹಲವಾರು ಸಮಾಜ ಸೇವೆ ಕಾರ್ಯಕ್ರಮ ನಡೆಸುತ್ತಾ ಬಂದಿದೆ. ಕೊಡಗು ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಆರೋಗ್ಯ ಶಿಬಿರ, ಸ್ವಯಂ ಉದ್ಯೋಗ ಸೃಷ್ಠಿ, ಮಕ್ಕಳಿಗೆ ಉಚಿತ ಶಿಕ್ಷಣ ಪ್ರೋತ್ಸಾಹ, ಶಾಲಾ ಪಠ್ಯ ಪುಸ್ತಕಗಳ ವಿತರಣೆ, ಮುಂತಾದ ಸಹಾಯವನ್ನು ಮಾಡುತ್ತಿದೆ. ವೃತ್ತಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ. ಆದ್ದರಿಂದ, ಪ್ರತಿಯೊಬ್ಬರೂ ವೃತ್ತಿ ಶಿಕ್ಷಣವನ್ನು ಆಸಕ್ತಿಯಿಂದ ಕಲಿಯಬೇಕು ಎಂದು ತಿಳಿಸಿದರು.
ಸ್ವಾಮೀ ವಿವೇಕಾನಂದರ ಆಶಯದಂತೆ ಸಂಕಷ್ಟದಲ್ಲಿರುವವರಿಗೆ ಆರ್ಥಿಕ ನೆರವು ಮಾತ್ರವಲ್ಲದೆ ಸ್ವಾವಲಂಭನೆಯ ಬದುಕನ್ನು ಸಾಗಿಸಲು ಆತ್ಮ ಸ್ಥೈರ್ಯವನ್ನು ನೀಡುವದು ಉತ್ತಮ ಸೇವೆಯಾಗಿದೆ. ಯಾವದೇ ಉತ್ತಮ ಕೆಲಸವನ್ನು ನಿಸ್ವಾರ್ಥ ಮನಸ್ಸಿನಿಂದ ಮಾಡಬೇಕು ಎಂದು ಅವರು ಹೇಳಿದರು.
ರಾಮಕೃಷ್ಣ ಆಶ್ರಮ ಮೈಸೂರು ಮತ್ತು ಟ್ರಸ್ಟಿಗಳು, ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಶನ್ನ ಅಧ್ಯಕ್ಷ ಮುಕ್ತಿದಾನಂದ ಜೀ ಸ್ವಾಮೀಜಿಯವರು ಮಾತನಾಡಿ ಮಾನವನ ಜೀವನ ಪ್ರಕೃತಿಯ ಮಡಿಲಲ್ಲಿದೆ. ಮನುಷ್ಯನ ಆಲೋಚನಾ ಶಕ್ತಿಯು ದೃಡವಾಗಿ ದಕ್ಷತೆಯಿಂದಿರಬೇಕು. ಭಗವಾನ್ ಬುದ್ಧರಂತೆ ಜ್ಞಾನವನ್ನು ಸಂಪಾದಿಸಲು ಪರಿಪೂರ್ಣವಾದ ಶಿಕ್ಷಣವನ್ನು ಪಡೆಯಬೇಕು ಎಂದು ಅವರು ಕರೆ ನೀಡಿದರು.
ಕರ್ಮವೆಂಬದು ಜೀವನದ ಮೌಲ್ಯವಾಗಿದೆ. ಮಾನವರು ನಿಸ್ವಾರ್ಥ ಸೇವೆಯನ್ನು ಮಾಡಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಆದ್ದರಿಂದ, ಸ್ವಾಮೀ ವಿವೇಕಾನಂದರ ಹಾಗೂ ಸಮಾಜದ ಅನೇಕ ಮಹಾನ್ ವ್ಯಕ್ತಿಗಳ ಆದರ್ಶ ಜೀವನವನ್ನು ಪಾಲಿಸುವ ಮೂಲಕ ಜ್ಞಾನಿಯಾಗಲು ಸಾಧ್ಯವಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪರಹಿತಾನಂದ ಸ್ವಾಮೀಜಿ, ಅಮೇರಿಕಾದ ನಾರ್ತ್ ಟೆಕ್ಷಾಸ್ ವಿಶ್ವವಿದ್ಯಾನಿಲಯದ ಪ್ರೊ.ಡಾ. ನಿಖಿಲ್ ಮೋರೊ, ರಾಂ ಪ್ರಸಾದ್, ಬೋಪೇಂದ್ರ ಸ್ವಾಮೀಜಿ, ಹಾಗೂ ಇತರರು ಇದ್ದರು. ಕುಮಾರಿ ರಕ್ಷಿತಾ ಹಾಗೂ ನೇತ್ರ ಪ್ರಾರ್ಥಿಸಿದರು, ಶೋಭಾನಂದ್ ಸ್ವಾಗತಿಸಿದರು, ಚಿ.ನಾ. ಸೋಮೇಶ್ ನಿರೂಪಿಸಿ, ವಂದಿಸಿದರು.