ಕುಶಾಲನಗರ, ಏ. 28: ಕುಶಾಲನಗರ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಕುಂಭಾಭಿಷೇಕ ಮಹೋತ್ಸವ ನಡೆಯಿತು. ಕುಶಾಲನಗರ ಆರ್ಯವೈಶ್ಯ ಮಂಡಳಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪವಿತ್ರ ಕಾವೇರಿ ನದಿ ತೀರದಲ್ಲಿ ಗಂಗಾಪೂಜೆ ನೆರವೇರಿಸಿ ನಂತರ ಕಳಸ ಹೊತ್ತು ಮಹಿಳೆಯರು ದೇವಾಲಯಕ್ಕೆ ಮೆರವಣಿಗೆಯಲ್ಲಿ ಆಗಮಿಸಿದರು.ಶುಕ್ರವಾರ ಬೆಳಿಗ್ಗೆ ಕನ್ನಿಕಾ ಪರಮೇಶ್ವರಿ ದೇವರಿಗೆ ಅಭಿಷೇಕ, ಮಹಾಗಣಪತಿ, ವಿಷ್ಣು ಸುಬ್ರಹ್ಮಣ್ಯ ಸೇರಿದಂತೆ ದೇವರುಗಳಿಗೆ ನವಗ್ರಹ ಕಲಶ ಸ್ಥಾಪನೆ, ಪೂಜೆ, ಹೋಮ ಕಾರ್ಯಕ್ರಮ ನಂತರ ಮಹಾಮಂಗಳಾರತಿ ನಡೆಯಿತು. ಸಂಜೆ ದುರ್ಗಾ ಸಪ್ತಶತಿ ಪಾರಾಯಣ, ದೀಪಾರಾಧನೆಯೊಂದಿಗೆ ಕುಂಭಾಬಿಷೇಕ ಮಹೋತ್ಸವ ತೆರೆ ಕಂಡಿತು.

ಈ ಸಂದರ್ಭ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್. ಸತ್ಯನಾರಾಯಣ, ಉಪಾಧ್ಯಕ್ಷ ವಿ.ಪಿ. ನಾಗೇಶ್, ಕಾರ್ಯದರ್ಶಿ ಬಿ.ಎಲ್. ಅಶೋಕ್ ಕುಮಾರ್, ಖಜಾಂಚಿ ಕೆ.ಜೆ. ಚಿನ್ನಸ್ವಾಮಿ, ನಿರ್ದೇಶಕರು ಹಾಗೂ ಮಹಿಳಾ ಮಂಡಳಿ, ಯುವಜನ ಸಂಘ, ಯುವತಿಯರ ಸಂಘದ ಪದಾಧಿಕಾರಿಗಳು ಇದ್ದರು.