ಗೋಣಿಕೊಪ್ಪಲು, ಏ. 18; ಬೆಂಗಳೂರಿನ ಬಂಧುವೊಬ್ಬರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ತೆರಳಿ ಹಿಂತಿರುಗುತ್ತಿದ್ದ ಸಂದರ್ಭ ಶ್ರೀರಂಗಪಟ್ಟಣದ ಸಮೀಪ ಬಾಬು ರಾಯನಕೊಪ್ಪಲು ಎಂಬಲ್ಲಿ ಮಾರುತಿ ಓಮ್ನಿ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಲ್ಲಿಗೆ ಸಮೀಪ ಕಳತ್ಮಾಡು ಗ್ರಾಮದ ಕತ್ರಿಕೊಲ್ಲಿ ಆಶಾ (50) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ನಿಶ್ಚಿತಾರ್ಥಕ್ಕೆ ತೆರಳಿದ್ದ ಕತ್ರಿಕೊಲ್ಲಿ ಡಾಲು ಅಣ್ಣಯ್ಯ (58) ಪತ್ನಿ ಆಶಾ ಮತ್ತು ಇಬ್ಬರು ಪುತ್ರರಾದ ದೀಕ್ಷಿತ್ (24) ಮತ್ತು ವಿನೀತ್ (19) ಕಳತ್ಮಾಡು ಗ್ರಾಮಕ್ಕೆ ಹಿಂತಿರುತ್ತಿದ್ದ ಸಂದರ್ಭ ಭೀಕರ ಅಪಘಾತ ಸಂಭವಿಸಿದೆ.

ಆಶಾ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಪತಿ ಡಾಲು ಅಣ್ಣಯ್ಯ ಅವರು ತೀವ್ರ ಗಾಯಗೊಂಡಿದ್ದು, ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಜೀವಾಪಯಾದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಪುತ್ರರಾದ ದೀಕ್ಷಿತ್ ಹಾಗೂ ವಿನೀತ್ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಇಂದು ಸಂಜೆ 5 ಗಂಟೆ ಸುಮಾರಿಗೆ ಆಶಾ ಅವರ ಮೃತ ದೇಹವನ್ನು ಕಳತ್ಮಾಡು ಗ್ರಾಮಕ್ಕೆ ತರಲಾಯಿತು.

ಆಶಾ ಮೂಲತಃ ಮುತ್ತಾರುಮುಡಿಯ ತೆಕ್ಕಡೆ ಮನೆಯವರು.

ಡಾಲು ಅಣ್ಣಯ್ಯ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಇಂದು ಬೆಳಗ್ಗಿನಿಂದ ಸ್ವಲ್ಪ ಚೇತರಿಕೆ ಕಂಡು ಬಂದಿದೆ ಎನ್ನಲಾಗಿದೆ. ಸಂಜೆ ಕಳತ್ಮಾಡುವಿನ ಕುಟುಂಬದ ಸ್ಮಶಾನದಲ್ಲಿ ಆಶಾ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

-ಟಿ.ಎಲ್.ಎಸ್.