ಶನಿವಾರಸಂತೆ, ಮಾ. 28: ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಪಾಲಪುರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ತತ್ವಾರ ಉಂಟಾಗಿದೆ. ಗ್ರಾಮ ಪಂಚಾಯಿತಿ ನೀರು ನಿರ್ವಾಹಕ 8-10 ದಿನಗಳಿಂದ ನೀರನ್ನು ಬಿಡದಿರುವದೇ ಸಮಸ್ಯೆಗೆ ಕಾರಣವಾಗಿದೆ. ಗ್ರಾಮಸ್ಥರು ನೀರಿಗಾಗಿ ಕೊಳವೆ ಬಾವಿ, ಇರುವವರ ಮನೆ ಬಾಗಿಲಿಗೆ ಅಲೆದಾಡುವಂತಾಗಿದೆ. ಕಿ.ಮೀ. ದೂರದ ನೀರಿನ ಟ್ಯಾಂಕ್‍ನಿಂದ ನೀರು ಹೊತ್ತು ತರುವ ಪರಿಸ್ಥಿತಿ ಉಂಟಾಗಿದೆ. ಗ್ರಾಮದ ಬನಶಂಕರಿ ದೇವಾಲಯದ ಬೀದಿಯ ನಿವಾಸಿಗಳಿಗೂ ನೀರಿನ ಸಮಸ್ಯೆ ಎದುರಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಅರ್ಜಿ ಸಲ್ಲಿಸಿ, ನೀರು ನಿರ್ವಾಹಕನನ್ನು ಬದಲಾಯಿಸಿ ಗ್ರಾಮದ ವ್ಯಕ್ತಿಯನ್ನೇ ನೇಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.