ಕೂಡಿಗೆ, ಮಾ. 22: ಕುಶಾಲನಗರ ಹೋಬಳಿಯ ಕೂಡಿಗೆಯ ಸರ್ಕಲ್‍ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ವಿ.ಪಿ. ಶಶಿಧರ್ ನೇತೃತ್ವದಲ್ಲಿ ನಡೆಯಿತು.

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ವಿ.ಪಿ. ಶಶಿಧರ್, ರಾಜ್ಯದಲ್ಲಿ ಮೈತ್ರಿ ಸರ್ಕಾರವು ಉತ್ತಮವಾದ ಯೋಜನೆಗಳನ್ನು ಹಮ್ಮಿಕೊಂಡು, ಜನಪರ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ. ಇವುಗಳನ್ನೆಲ್ಲಾ ಅರಿತು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲವಿಗೆ ಸನ್ನದ್ಧರಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಐ.ಎನ್.ಟಿ.ಯು.ಸಿ. ಜಿಲ್ಲಾಧ್ಯಕ್ಷ ಟಿ.ಪಿ. ಹಮೀದ್, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವಾದ ಹಿನ್ನೆಲೆ ಎಲ್ಲಾ ಕಾರ್ಯಕರ್ತರು ತಮ್ಮ ನಡುವೆ ವೈಮನಸ್ಸಿದ್ದಲ್ಲಿ ಅದನ್ನು ಬಿಟ್ಟು ಕಾಂಗ್ರೆಸ್ ಪಕ್ಷದ ಗೆಲವಿಗೆ ಒಗ್ಗೂಡಬೇಕು ಎಂದರು. ಕೆ.ಪಿ.ಸಿ.ಸಿ. ಸದಸ್ಯ ನಟೇಶ್ ಗೌಡ ಹಾಗೂ ಡಿ.ಸಿ. ಅಬ್ದುಲ್ ಖಾದರ್ ಮಾತನಾಡಿದರು. ವೇದಿಕೆಯಲ್ಲಿ ಸೀಗೇಹೊಸೂರಿನ ಮಾಜಿ ಸದಸ್ಯ ಕೃಷ್ಣ, ನಾಗರಾಜ್, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಹನೀಫ್, ರಝಾಕ್, ಕೂಡಿಗೆ ಗ್ರಾ.ಪಂ. ಮಾಜಿ ಅಧ್ಯಕ್ಷ ದೇವರಾಜು, ಸದಸ್ಯೆ ಪುಷ್ಪಾ ಹಾಗೂ ಕಾರ್ಯಕರ್ತರು ಇದ್ದರು.