ಮಡಿಕೇರಿ, ಮಾ. 15: ಶ್ರೀ ಭಾಗಮಂಡಲ ತಲಕಾವೇರಿ ದೇಗುಲದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ಆಯೋಜಿ ಸಲು ಪ್ರತ್ಯೇಕವಾಗಿ ರಚನೆಗೊಂಡಿದ್ದ 19 ಮಂದಿಯ ಸಮಿತಿಯ ಅವಶ್ಯಕತೆ ಇರುವದಿಲ್ಲವೆಂದು ಜಿಲ್ಲಾಧಿಕಾರಿಗಳ ನ್ಯಾಯಾಲಯವು, ಎಂ.ಬಿ. ದೇವಯ್ಯ ಅವರ ನೇತೃತ್ವದ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಶ್ರೀ ಭಾಗಮಂಡಲ ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ರಚನೆಯಾಗದಿದ್ದ 2017ರಲ್ಲಿ 19 ಮಂದಿಯ ಸಮಿತಿಯನ್ನು ರಚಿಸಿ ಬ್ರಹ್ಮಕಲಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸಬೇಕು ಮತ್ತು ಸಮಿತಿಯನ್ನು ಪುರಸ್ಕರಿಸಬೇಕೆಂದು ಎಂ.ಬಿ.ದೇವಯ್ಯ, ಎಂ.ಎ. ನಾಣಯ್ಯ, ಎಂ.ಬಿ. ಕುಮಾರ್, ಸಿ.ಜಿ. ಸತೀಶ್, ಕೆ. ರಮೇಶ್ ಮುದ್ದಯ್ಯ, ಬಿ.ಎ. ರಮೇಶ್ ಚಂಗಪ್ಪ ಹಾಗೂ ಕೆ. ಫ್ಯಾನ್ಸಿ ಗಣಪತಿ ಅರ್ಜಿ ಸಲ್ಲಿಸಿದ್ದರು.

ಜಿಲ್ಲಾಧಿಕಾರಿಗಳ ನ್ಯಾಯಾಲಯ ದಲ್ಲಿ ಈ ಅರ್ಜಿಯ ವಿಚಾರಣೆ ನಡೆದು ಇದೀಗ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಪ್ರಸ್ತುತ ದೇವಾಲಯ ವ್ಯವಸ್ಥಾಪನಾ ಸಮಿತಿ ಅಸ್ತಿತ್ವದಲ್ಲಿರುವದರಿಂದ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಪ್ರತ್ಯೇಕ ಸಮಿತಿಯ ಅಗತ್ಯವಿಲ್ಲವೆಂದು ಮುಜರಾಯಿ ಕಾಯ್ದೆಯನ್ನು ಉಲ್ಲೇಖಿಸಿ ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಕರ್ನಾಟಕ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಕಲಂ 25ರಂತೆ ವ್ಯವಸ್ಥಾಪನಾ ಸಮಿತಿಯು ಸರ್ಕಾರದಿಂದ ರಚನೆಯಾಗಿರು ವದರಿಂದ, 2002ರ ನಿಯಮ 33(5) ಪ್ರಚಲಿತದಲ್ಲಿರುವ ರೂಢಿ ಮತ್ತು ಆಚರಣೆಗಳಿಗೆ ಅನುಸಾರವಾಗಿ ರಥೋತ್ಸವ, ಜಾತ್ರೆ ಮತ್ತು ಯಾವದೇ ವಿಶೇಷ ಉತ್ಸವಗಳನ್ನು ನಡೆಸುವ ಜವಾಬ್ದಾರಿಯನ್ನು ವ್ಯವಸ್ಥಾಪನಾ ಸಮಿತಿ ಹೊಂದಿರುವದರಿಂದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ಕೆ ಪ್ರತ್ಯೇಕ ಸಮಿತಿಯ ಅವಶ್ಯಕತೆ ಇರುವದಿಲ್ಲವೆಂದು ಜಿಲ್ಲಾಧಿಕಾರಿಗಳ ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.