ಮಡಿಕೇರಿ, ಮಾ.15 : ಲೋಕಸಭಾ ಚುನಾವಣೆ ಹಿನ್ನೆಲೆ ಮಾದರಿ ನೀತಿ ಸಂಹಿತೆ ಪಾಲಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ವಿವಿಧ ಬ್ಯಾಂಕ್‍ಗಳ ವ್ಯವಸ್ಥಾಪಕರೊಂದಿಗೆ ಸಭೆಯು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನಗಳನ್ನು ಚಾಚು ತಪ್ಪದೇ ಪಾಲಿಸಬೇಕು. ಮಾದರಿ ನೀತಿ ಸಂಹಿತೆ ಪ್ರತಿಯೊಬ್ಬರಿಗೂ ಅನ್ವಯಿಸಲಿದ್ದು, ಅದರಂತೆ ಬ್ಯಾಂಕುಗಳು ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಒಂದು ಬ್ಯಾಂಕಿನಿಂದ ಮತ್ತೊಂದು ಬ್ಯಾಂಕ್‍ಗೆ ಅಥವಾ ಎಟಿಎಂಗೆ ಹಣ ತೆಗೆದುಕೊಂಡು ಹೋಗುವಾಗ ದಾಖಲೆ ಇರಬೇಕು. ಹಣವನ್ನು

ಎಲ್ಲಿಂದ ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂಬ ಬಗ್ಗೆಯೂ ಮಾಹಿತಿ ಇರಬೇಕು. ಯಾರೇ ಆದರೂ ರೂ. 50 ಸಾವಿರ ಹಣ ಮೇಲ್ಪಟ್ಟು ತೆಗೆದುಕೊಂಡು ಹೋದಲ್ಲಿ ದಾಖಲೆ ಇರಬೇಕು. ರೂ. 10 ಲಕ್ಷ ಮೇಲ್ಪಟ್ಟು ಹಣ ಇದ್ದಲ್ಲಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕು ಎಂದು ವಿವರಿಸಿದರು.

ಜಿ.ಪಂ.ಸಿಇಓ ಕೆ.ಲಕ್ಷ್ಮಿಪ್ರಿಯಾ ಅವರು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನ ಪಾಲಿಸುವದರ ಜೊತೆಗೆ ಚುನಾವಣಾ ಆಯೋಗದ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಸೂಚಿಸಿದರು.

ಸಹಕಾರ ಸಂಘಗಳ ಉಪ ನಿಬಂಧಕ ಭಾಸ್ಕರ ಆಚಾರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಗುಪ್ತಾಜಿ, ದಿನೇಶ್ ಪೈ (ಭಾರತೀಯ ಸ್ಟೇಟ್ ಬ್ಯಾಂಕ್), ಶ್ರೇಯಾಂಕ್ ಹೆಗಡೆ (ಇಂಡಿಯನ್ ಓವರ್‍ಸಿಸ್ ಬ್ಯಾಂಕ್), ಪಿ.ಅನಂತ್ (ವಿಜಯ ಬ್ಯಾಂಕ್), ಆಂಥೋನಿ (ಕಾರ್ಪೋರೇಷನ್ ಬ್ಯಾಂಕ್), ರೊನಾಲ್ಡ್ (ವಿಜಯ ಬ್ಯಾಂಕ್), ಅರ್ಜುನ್ (ಕೆನರಾ ಬ್ಯಾಂಕ್), ಎಸ್.ಆರ್.ಕೆ.ರೆಡ್ಡಿ (ಬ್ಯಾಂಕ್ ಆಫ್ ಬರೋಡಾ), ಮಹೇಂದ್ರ (ಐಸಿಐಸಿ ಬ್ಯಾಂಕ್), ರಾಜು ಪಾಂಡೆ (ಬ್ಯಾಂಕ್ ಆಫ್ ಇಂಡಿಯಾ), ಕಾವೇರಪ್ಪ (ಸೌತ್ ಇಂಡಿಯನ್ ಬ್ಯಾಂಕ್), ದತ್ತಾತ್ತೇಯ (ಮಹೀಂದ್ರ ಕೊಟೇಕ್ ಬ್ಯಾಂಕ್) ಇತರರು ಇದ್ದರು.