ಗೋಣಿಕೊಪ್ಪ ವರದಿ, ಮಾ. 13: ಮೈಸೂರು ವಿದ್ಯಾಶ್ರಮ ಕಾಲೇಜು ಸಹಯೋಗದಲ್ಲಿ ಅಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಅಂತರ್ ಕಾಲೇಜು ಹಾಕಿ ಟೂರ್ನಿಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಬೆಂಗಳೂರು ಆಕ್ಸ್‍ಫರ್ಡ್ ಕಾಲೇಜು ತಂಡದ ವಿರುದ್ಧ ಜಯಗಳಿಸಿ ಸಾಧನೆ ಮಾಡಿತು.

ಕಾವೇರಿ ಕಾಲೇಜು ಪರ ಸೋಮಣ್ಣ ಬಾರಿಸಿದ ಏಕೈಕ ಗೋಲು ಗೆಲವು ತಂದುಕೊಡುವಲ್ಲಿ ಯಶಸ್ವಿಯಾಯಿತು. ಬೆಂಗಳೂರು ತಂಡ ಗೋಲು ದಾಖಲಿಸಲಾಗದೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ವಿಜೇತ ತಂಡಕ್ಕೆ 50 ಸಾವಿರ ನಗದು ಹಾಗೂ ಟ್ರೋಫಿ ನೀಡಿ ಗೌರವಿಸಲಾಯಿತು. ಉತ್ತಮ ತರಬೇತು ನೀಡಿ ಚಾಂಪಿಯನ್ ಪ್ರಶಸ್ತಿ ಗೆಲ್ಲುವಲ್ಲಿ ಮುಖ್ಯಪಾತ್ರವಹಿಸಿದ ಗೋಣಿಕೊಪ್ಪ ಕಾವೇರಿ ಕಾಲೇಜು ತಂಡದ ತರಬೇತುದಾರ ಮಿನ್ನಂಡ ಜೋಯಪ್ಪ ಅವರಿಗೆ ಬೆಸ್ಟ್ ಕೋಚ್ ಪ್ರಶಸ್ತಿ ನೀಡಲಾಯಿತು. ತಂಡದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಚಿಟ್ಯಪ್ಪ ಪಾಲ್ಗೊಂಡಿದ್ದರು. -ಸುದ್ದಿಪುತ್ರ