ನಾಪೆÇೀಕ್ಲು, ಮಾ. 9: ಬೈಕಿನಲ್ಲಿ ಇಬ್ಬರು ಸಾಗುತ್ತಿದ್ದ ಸಂದರ್ಭ ಒಂಟಿ ಸಲಗವೊಂದು ಇವರ ಮೇಲೆ ಧಾಳಿ ನಡೆಸಿ ಬೈಕನ್ನು ಕಾಫಿ ತೋಟಕ್ಕೆ ಎಸೆದು ಒಬ್ಬನಿಗೆ ಗಾಯಗೊಳಿಸಿದ ಘಟನೆ ಚೆಯ್ಯಂಡಾಣೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿ ನಡೆದಿದೆ.

ವೀರಾಜಪೇಟೆ ಬೋಯಿಕೇರಿ ನಿವಾಸಿ ಚಿಮ್ಮಣ್ಣ ಮತ್ತು ಚೇಲಾವರ ಗ್ರಾಮ ಕಬ್ಬೆ ನಿವಾಸಿ ಸುರೇಂದ್ರ ಎಂಬಿಬ್ಬರು ಬೈಕ್‍ನಲ್ಲಿ ಇಂದು ಸಂಜೆ 5.30 ಗಂಟೆ ಸುಮಾರಿಗೆ ಕೆಲಸದ ನಿಮಿತ್ತ ಚೇಲಾವರ ಪತ್ತೇಟ್ ರಸ್ತೆಯಲ್ಲಿ ಬೈಕ್‍ನಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಏಕಾಏಕಿ ಒಂಟಿ ಸಲಗವೊಂದು ಧಾಳಿ ನಡೆಸಿದೆ. ಬೈಕ್‍ನಿಂದ ಕೆಳಗೆ ಬಿದ್ದ ಸುರೇಂದ್ರ ಓಡಿ ಹೋಗಿ ತಪ್ಪಿಸಿಕೊಂಡರೆ ಸ್ಥಳದಲ್ಲಿಯೇ ಇದ್ದ ಬೈಕನ್ನು ಕಾಫಿ ತೋಟದ ಒಳಗೆ ಎತ್ತೆಸೆದ ಸಲಗ ಚಿಮ್ಮಣ್ಣ ಅವರ ತೊಡೆ ಮತ್ತು ಕಾಲಿಗೆ ಗಾಯಗೊಳಿಸಿದೆ. ಇನ್ನೇನು ಕೊಲ್ಲಬೇಕು ಎನ್ನುವ ಸಮಯದಲ್ಲಿ ಸುರೇಂದ್ರ ಬೊಬ್ಬೆ ಹಾಕಿದ ಕಾರಣ ಹೆದರಿದ ಒಂಟಿ ಸಲಗ ಕಾಫಿ ತೋಟದ ಒಳಗೆ ಓಡಿ ಕಣ್ಮರೆಯಾಗಿದೆ.

ಕೂಡಲೇ ಗ್ರಾಮಸ್ಥರು ಚಿಮ್ಮಣ್ಣನನ್ನು ಆಟೋ ರಿಕ್ಷಾದ ಮೂಲಕ ವಿರಾಜಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೂ ಮಾಹಿತಿ ನೀಡಿರುವದಾಗಿ ಗ್ರಾಮಸ್ಥರಾದ ಬಾಚಮಂಡ ತಿಲಕ್ ‘ಶಕ್ತಿ’ಗೆ ತಿಳಿಸಿದ್ದಾರೆ.

-ಪಿ.ವಿ.ಪ್ರಭಾಕರ್