ಮಡಿಕೇರಿ, ಮಾ. 1: ಕೊಡಗು ಜಲಸ್ಫೋಟದಿಂದ ಸಂಕಷ್ಟಕ್ಕೊಳ ಗಾಗಿದ್ದ ವಿದ್ಯಾರ್ಥಿಗಳ ಸಂಪೂರ್ಣ ವಿದ್ಯಾಭ್ಯಾಸದ ಹೊಣೆಗಾರಿಕೆಯನ್ನು ದಾನಿಗಳ ನೆರವಿನೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯ ಭರಿಸುವದಾಗಿ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ನೆರೆ ಸಂತ್ರಸ್ತ ಪರಿಹಾರ ಪುನರ್ ಪರಿಶೀಲನಾ ಸಭೆಯಲ್ಲಿ ನಿರ್ಣಯಿಸಲಾಯಿತು.

ಮಂಗಳೂರು ವಿಶ್ವವಿದ್ಯಾನಿಲಯ ನೆರೆ ಸಂತ್ರಸ್ತ ಪರಿಹಾರ ಸಮಿತಿಯ ವಿಶೇಷ ಅಧಿಕಾರಿ ಡಾ. ನಾಗಪ್ಪ ಗೌಡ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು.

ಸಮಿತಿಯ ಸದಸ್ಯರುಗಳಾದ ಸಹಾಯಕ ಕುಲಸಚಿವ ಉಕ್ರಪ್ಪ ನಾಯಕ್, ಪ್ರಾಂಶುಪಾಲ ಡಾ. ಟಿ.ಡಿ. ತಿಮ್ಮಯ್ಯ, ಸಮಿತಿ ಸಂಚಾಲಕ ಡಾ. ರವಿಶಂಕರ್, ಸಮಿತಿ ಸದಸ್ಯರಾದ ಡಾ. ತಿಪ್ಪೇಸ್ವಾಮಿ, ಡಾ. ಮಹದೇವ, ಲೋಕಾಯುಕ್ತ ಅಧಿಕಾರಿಗಳು, ಕೊಡಗಿನ ಎಲ್ಲಾ ಕಾಲೇಜಿನ ಪ್ರಾಂಶುಪಾಲರು ಹಾಗೂ ನೆರೆ ಭಾದಿತ ಪ್ರದೇಶದ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗು ಜಲಸ್ಫೋಟದ ಸಂದರ್ಭ ಕಾಲೇಜು, ವಿಶ್ವ ವಿದ್ಯಾನಿಲಯ, ದಾನಿಗಳು, ಸ್ವಯಂ ಸೇವಾ-ಸಂಸ್ಥೆಗಳು, ಸಾರ್ವಜನಿಕರು, ಸ್ವಯಂ ಸೇವಕರು ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳು ಸಂತ್ರಸ್ತರ ನೆರವಿಗೆ ಧಾವಿಸಿದ್ದು, ಅದರಲ್ಲಿ ಸಂತ್ರಸ್ತ ವಿದ್ಯಾರ್ಥಿಗಳ ಶಿಕ್ಷಣ ಯಾವದೇ ರೀತಿಯಲ್ಲಿ ಮೊಟಕು ಗೊಳ್ಳದ ರೀತಿಯಲ್ಲಿ ಹಲವರು ನೆರವಿಗೆ ಮುಂದೆ ಬಂದಿದ್ದರು.

ಈ ಹಿನ್ನೆಲೆ ಕರ್ನಾಟಕ ಲೋಕಾ ಯುಕ್ತ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಕೊಡಗಿಗೆ ಬಂದಿದ್ದ ಅನುದಾನ ವಿದ್ಯಾರ್ಥಿಗಳಿಗೆ ಯಾವ ರೀತಿ ಸದುಪಯೋಗವಾಗಿದೆ ಎಂಬ ಕುರಿತು ವಿಶ್ವವಿದ್ಯಾನಿಲಯಕ್ಕೆ ಸೂಚಿಸಿತ್ತು, ಹಾಗೂ ಅದರ ನೋಡಲ್ ಅಧಿಕಾರಿಯಾಗಿ ಕುಲಪತಿಯವರನ್ನು ನೇಮಿಸಿತ್ತು.

ಈ ನಿಟ್ಟಿನಲ್ಲಿ ತಾ. 7 ರಂದು ಮಂಗಳೂರು ವಿಶ್ವವಿದ್ಯಾನಿಲಯ ನೆರೆ ಸಂತ್ರಸ್ತ ಪರಿಹಾರ ಸಮಿತಿಯು ಲೋಕಾಯುಕ್ತಕ್ಕೆ ವಿಸ್ಕøತ ವರದಿ ಸಲ್ಲಿಸಬೇಕಿರುವದರಿಂದ, ಈ ಸಭೆ ನಡೆಸಿ ಪರಿಹಾರ ಕಾರ್ಯಗಳ ಮಾಹಿತಿಯನ್ನು ಸಂಗ್ರಹಿಸಿದರು.

ಸಭೆಯಲ್ಲಿ ಭಾಗವಹಿಸಿ ಅಭಿಪ್ರಾಯ ಹಂಚಿಕೊಂಡ ಎಲ್ಲಾ ವಿದ್ಯಾರ್ಥಿಗಳು, ಕಾಲೇಜಿನಿಂದ ಸಿಕ್ಕ ಸ್ಪಂದನೆಯ ಕುರಿತು ಕೃತಜ್ಞತೆ ಸಲ್ಲಿಸಿದರು. ಕಾಲೇಜಿನಿಂದ ಶುಲ್ಕ ವಿನಾಯಿತಿ, ಉಳಿದುಕೊಳ್ಳಲು ವಸತಿ ವ್ಯವಸ್ಥೆ ಕಲ್ಪಿಸಿದ್ದರಿಂದಾಗಿ ಶಿಕ್ಷಣ ಮುಂದುವರೆಸಲು ಸಾಧ್ಯವಾಯಿತು ಎಂದರಾದರೂ, ಸರ್ಕಾರದಿಂದ ತಮಗೆ ಸಿಗಬೇಕಿದ್ದ ಸೌಲಭ್ಯಗಳು ಸಮರ್ಪಕವಾಗಿ ಸಿಗದಿದ್ದರಿಂದಾಗಿ ಇನ್ನೂ ಹಲವಾರು ವಿದ್ಯಾರ್ಥಿಗಳ ಕುಟುಂಬ ಸಂಕಷ್ಟದ ಪರಿಸ್ಥಿತಿಯನ್ನೇ ಎದುರಿಸುತ್ತಿರುವದಾಗಿ ಕಣ್ಣೀರಿಟ್ಟರು. ಇದಕ್ಕೆ ಸ್ಪಂದಿಸಿದ ಡಾ. ನಾಗಪ್ಪ ಗೌಡ, ಲೋಕಾಯುಕ್ತ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಜಿಲ್ಲಾಡಳಿತಕ್ಕೆ ಈ ಕುರಿತು ಮನವಿ ಮಾಡಿ ಸೂಕ್ತ ಪರಿಹಾರೋಪಾಯಕ್ಕೆ ಕ್ರಮ ಕೈಗೊಳ್ಳಲು ಮುಂದಾಗುವಂತೆ ಸೂಚಿಸಿದರು. ಸಂಕಷ್ಟದಿಂದಾಗಿ, ಶಿಕ್ಷಣದ ಶುಲ್ಕ ಪಾವತಿಸಲು ಸಾಧ್ಯವಾಗದಿರುವದು ಹಾಗೂ ತಮ್ಮ ವಿದ್ಯಾಭ್ಯಾಸÀ ಮೊಟಕುಗೊಳ್ಳುವ ಸಾಧ್ಯತೆಯ ಕುರಿತು ವಿದ್ಯಾರ್ಥಿ ಗಳಿಗಿದ್ದ, ಗೊಂದಲವನ್ನು ನಿವಾರಿಸಿದ ಪ್ರಾಂಶುಪಾಲ ಡಾ. ಟಿ.ಡಿ. ತಿಮ್ಮಯ್ಯ, ಸಂತ್ರಸ್ತ ವಿದ್ಯಾರ್ಥಿಗಳ ಪ್ರಸಕ್ತ ಸಾಲಿನ ಶಿಕ್ಷಣ ಹಾಗೂ ಭವಿಷ್ಯದ ಉನ್ನತ ಶಿಕ್ಷಣಕ್ಕೂ ವಿಶ್ವವಿದ್ಯಾನಿಲಯ ಜತೆಯಿರುವದಾಗಿ ಭರವಸೆ ನೀಡಿದರಲ್ಲದೆ, ತಮ್ಮ ಅಹವಾಲನ್ನು ಲಿಖಿತ ರೂಪದಲ್ಲಿ ತಿಳಿಸುವಂತೆ ಕೋರಿದರು. ಇದೀಗಾಗಲೇ ಫೀಲ್ಡ್ ಮಾರ್ಷಲ್ ಕೆ.ಎಂ. ಕಾಲೇಜಿನ ವಿದ್ಯಾರ್ಥಿಗಳ ನೆರವಿಗೆ ಬಂದ ಹಣ ಸುಮಾರು ರೂಪಾಯಿ 2 ಲಕ್ಷಗಳಿದ್ದು, ಆ ಹಣದಲ್ಲಿಯೇ ಸಂತ್ರಸ್ತ ವಿದ್ಯಾರ್ಥಿ ಗಳಿಗೆ ಉಚಿತ ಊಟ, ವಸತಿ ಕಲ್ಪಿಸಲಾಗುತ್ತಿದೆ. ಇನ್ನಿತರ ನೆರವು ಅಗತ್ಯವಿದ್ದರೆ, ಸ್ಪಂದಿಸುವ ಭರವಸೆ ನೀಡಿದರು.