ಮಡಿಕೇರಿ, ಮಾ.1 : ಕಾರ್ಮಿಕರು ರಾಷ್ಟ್ರದ ಶಿಲ್ಪಿಗಳು, ಶಿಲ್ಪಿಗಳಿಲ್ಲದೇ ಯಾವುದೇ ವಿಗ್ರಹಗಳು ರೂಪಗೊಳ್ಳುವದಿಲ್ಲ. ಹಾಗೆಯೇ ಕಾರ್ಮಿಕರಿಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ ಎಂದು ಶಾಸಕರಾದ ಅಪ್ಪಚ್ಚು ರಂಜನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಂಯುಕ್ತ ಆಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಕಾರ್ಮಿಕ ಸಮ್ಮಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಮಿಕರು ಉತ್ತಮ ಬದುಕು ಕಟ್ಟಿಕೊಳ್ಳುವಂತಾಗಲು ಸಹಾಯಧನ ಕಲ್ಪಿಸಬೇಕು. ಜೊತೆಗೆ ಪಿಂಚಣಿ ಸೌಲಭ್ಯ ದೊರೆಯುವಂತಾಗಬೇಕು ಎಂದು ಶಾಸಕರು ಹೇಳಿದರು.
ಕಾರ್ಮಿಕರಿಗೆ ಹಾಗೂ ಅವರ ಅವಲಂಭಿತ ಕುಟುಂಬ ಸದಸ್ಯರಿಗೆ ಪಿಂಚಣಿ ಸೌಲಭ್ಯ, ಹೆರಿಗೆ ಸೌಲಭ್ಯ, ಕಲಿಕೆ ಭಾಗ್ಯ, ಕಾರ್ಮಿಕ ಆರೋಗ್ಯ ಭಾಗ್ಯ, ಅಪಘಾತ ಪರಿಹಾರ, ಪ್ರಧಾನ ಮಂತ್ರಿಗಳ ಶ್ರಮಯೋಗಿ ಮನ್ದನ್ ಯೋಜನೆ ಹೀಗೆ ಹಲವು ಯೋಜನೆಗಳನ್ನು ಜಾರಿಗೆಗೊಳಿಸಿದ್ದು ಅವುಗಳ ಪ್ರಯೋಜನವನ್ನು ಕಾರ್ಮಿಕರು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.
ಕಟ್ಟಡ ಕಾರ್ಮಿಕರು ತಾವು ಕೆಲಸ ಮಾಡುವ ಸಂದರ್ಭದಲ್ಲಿ ಜೀವ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಂಡು ಎಚ್ಚರದಿಂದ ಕೆಲಸ ಮಾಡಬೇಕು ಎಂದು ಕಾರ್ಮಿಕರಿಗೆ ಸಲಹೆ ಮಾಡಿದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಸರ್ಕಾರವು ಕಾರ್ಮಿಕರ ಏಳ್ಗೆಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳ ಸೌಲಭ್ಯಗಳನ್ನು ಪ್ರತಿಯೊಬ್ಬ ಕಾರ್ಮಿಕರಿಗೂ ತಲುಪುವಂತಾಗಬೇಕು ಎಂದರು.
ಕಾರ್ಮಿಕರನ್ನು ಸಮ್ಮಾನ ಮಾಡುತ್ತಿರುವ ಕಾರ್ಯಕ್ರಮವು ಶ್ಲಾಘನೀಯವಾಗಿದ್ದು, ಇಂತಹ ಕಾರ್ಯಕ್ರಮಗಳು ಮುಂದುವರೆಯ ಬೇಕು. ಆಗ ಕಾರ್ಮಿಕರು ತಾವು ತೊಡಗಿಸಿಕೊಂಡಿರುವ ವೃತ್ತಿಯನ್ನು ಹೆಮ್ಮೆಯಿಂದ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಕಾರ್ಮಿಕರ ಮಾಹಿತಿ ಪಡೆದು ಅವರಿಗೆ ಇರುವ ಸರ್ಕಾರದ ಸೌಲಭ್ಯಗಳ ಮಾಹಿತಿಗಳನ್ನು ನೀಡುವಂತಾಗಬೇಕು ಎಂದರು.
ತಾ.ಪಂ.ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ ಕಾರ್ಮಿಕರು ತಮ್ಮ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗಲು ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಅವರನ್ನು ಪ್ರೋತ್ಸಾಹಿಸುವ ಕಾರ್ಯಗಳಿಗೆ ಕೈ ಜೋಡಿಸಬೇಕು ಎಂದು ಹೇಳಿದರು.
ಜಿ.ಪಂ.ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರು ಮಾತನಾಡಿ ಕಾರ್ಮಿಕರು ಪ್ರಥಮವಾಗಿ ತಮ್ಮ ಹೆಸರುಗಳನ್ನು ಸಂಬಂಧಿಸಿದ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿಯಾಗದೇ ಯಾವದೇ ಸೌಲಭ್ಯಗಳು ಸಿಗುವದಿಲ್ಲ. ನೋಂದಣಿಯನ್ನು ಕಡ್ಡಾಯವಾಗಿ ಮಾಡಿಕೊಂಡು ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ಮಾಡಿದರು.
ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ ಕಾರ್ಮಿಕರನ್ನು ಸಮ್ಮಾನ ಮಾಡುತ್ತಿರುವದು ಶ್ಲಾಘನೀಯವಾದದ್ದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಮಿಕ ಇಲಾಖೆ ಅಧಿüಕಾರಿ ಎಂ.ಎಚ್.ರಾಮಕೃಷ್ಣ ಮಾತನಾಡಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ಕಾರ್ಮಿಕರನ್ನು ನೋಂದಾಯಿಸಲಾಗುತ್ತಿದ್ದು, ಇದುವರೆಗೆ ಜಿಲ್ಲೆಯಲ್ಲಿ 4477 ಕಾರ್ಮಿಕರು ಹೆಸರು ನೋಂದಾಯಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಮಿಕರ ಮಕ್ಕಳಿಗೆ 1 ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ರೂ. 2 ಸಾವಿರಗಳಿಂದ 20 ಸಾವಿರಗಳ ವರೆಗೆ ಶೈಕ್ಷಣಿಕ ಧನ ಸಹಾಯವನ್ನು ನೋಂದಾಯಿತ ಮಹಿಳಾ ಕಟ್ಟಡ ಕಾರ್ಮಿಕರಿಗೆ ಹೆರಿಗೆ ಭತ್ಯೆ 15 ಸಾವಿರ, ಮಕ್ಕಳ ಮದುವೆಗೆ 50 ಸಾವಿರಗಳ ಧನ ಸಹಾಯ ಹಾಗೂ 60 ವರ್ಷ ಪೂರ್ಣಗೊಂಡಲ್ಲಿ ಮಾಸಿಕ 1000 ಪಿಂಚಣಿ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಸುಮಾರು 1200 ಜನ ಕಾರ್ಮಿಕರಿಗೆ ಧನ ಸಹಾಯ ಮಾಡಲಾಗಿದೆ. ಮತ್ತು ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ (ಗೃಹ ಕೆಲಸ, ಟೈಲರ್, ದೋಬಿ, ಕ್ಷೌರಿಕರು, ಅಕ್ಕಸಾಲಿಗರು, ಹಮಾಲಿಗಳು, ಕಮ್ಮಾರರು, ಕುಂಬಾರರು, ಚಿಂದಿ ಆಯುವವರು) ಈ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಮಂಡಳಿ ವತಿಯಿಂದ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಈಗಾಗಲೇ 1074 ಸ್ಮಾರ್ಟ್ ಕಾರ್ಡ್ ಅರ್ಜಿಗಳು ಬಂದಿದ್ದು, ಅವುಗಳನ್ನು ಮಂಡಳಿಗೆ ಕಳುಹಿಸಲಾಗಿದ್ದು ಸ್ಮಾರ್ಟ್ ಕಾರ್ಡ್ ಬಂದ ನಂತರ ವಿತರಿಸಲಾಗುವದು ಎಂದು ಹೇಳಿದರು.
ವಿವಿಧ ವೃತ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಸೇವಾ ಅವಧಿ ಮತ್ತು ನೈಪುಣ್ಯತೆಯ ಆಧಾರದ ಮೇಲೆ ಪ್ರಥಮವಾಗಿ ಜಿಲ್ಲೆಯಲ್ಲಿ 9 ಜನ ಕಾರ್ಮಿಕರಿಗೆ 10 ಸಾವಿರಗಳ ಚೆಕ್, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಹಾಗೂ 78 ಜನ ಕಾರ್ಮಿಕರಿಗೆ 1 ಸಾವಿರ ಚೆಕ್, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ಹಾಗೂ ಹಾಗೂ 50 ಜನ ಕಾರ್ಮಿಕರಿಗೆ ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಸಂತ ಮೈಕಲರ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಉದ್ಯೋಗ ವಿನಿಮಯ ಅಧಿಕಾರಿ ಸಿ.ಜಗನ್ನಾಥ್ ಸ್ವಾಗತಿಸಿ, ನಿರೂಪಿಸಿದರು ಹಾಗೂ ಕಾರ್ಮಿಕ ಅಧಿಕಾರಿ ಎಂ.ಎಚ್.ರಾಮಕೃಷ್ಣ ವಂದಿಸಿದರು.