ಮಡಿಕೇರಿ : 25: ನಗರದ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ಆಕರ್ಷಣೀಯ ‘ಮಡಿಕೇರಿ ಸ್ಕ್ವೇರ್ ನಿರ್ಮಾಣದ ಮೊದಲ ಹಂತದ ತಡೆಗೋಡೆ ನಿರ್ಮಾಣಕ್ಕೆ ಪೂರಕವಾದ ಮಣ್ಣು ಪರೀಕ್ಷಾ ಕೆಲಸವನ್ನು ಆರಂಭಿಸಲಾಗಿದ್ದು, ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಚಾಲನೆ ನೀಡಿದರು.

ಮಣ್ಣು ಕುಸಿದ ಜಾಗದ ಮೇಲ್ಭಾಗÀದಿಂದ ಎರಡು ಜಾಗಗಳನ್ನು ಗುರುತಿಸಿ ಸುಮಾರು ನೂರು ಅಡಿ ಆಳದವರೆಗೆ ಮಣ್ಣು ಕೊರೆದು ಪರೀಕ್ಷೆಗೆ ಒಳಪಡಿಸಿ ವರದಿ ತಯಾರಿಸುವ ಜವಾಬ್ದಾರಿಯನ್ನು ಬೆಂಗಳೂರಿನ ಪ್ರತಿಷ್ಠಿತ ಬಿ.ಎಮ್.ಎಸ್. ಇಂಜಿನಿಯ ರಿಂಗ್ ಕಾಲೇಜಿಗೆ ವಹಿಸಲಾಗಿದ್ದು, ಈ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿರುವ ಡಾ. ನಾಗರಾಜ್ ಇದರ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಮಣ್ಣು ಪರೀಕ್ಷೆ ವರದಿ ಬಂದ ಕೂಡಲೇ ಪ್ರಥಮ ಹಂತದಲ್ಲಿ ನೂತನ ತಂತ್ರಜ್ಞಾನ ಬಳಸಿ ತಡೆಗೋಡೆ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಲಿರುವದಾಗಿ ಕಾವೇರಮ್ಮ ಸೋಮಣ್ಣ ತಿಳಿಸಿದರು.

ಎರಡನೇ ಹಂತದಲ್ಲಿ ತಡೆಗೋಡೆಯನ್ನು ಬಳಸಿ ‘ಮಡಿಕೇರಿ ಸ್ಕ್ವೇರ್’ ಎಂಬ ವಿನೂತನ ಶೈಲಿಯ ಆಕರ್ಷಣಾ ಕೇಂದ್ರವನ್ನಾಗಿ ಈ ಪ್ರದೇಶವನ್ನು ಮಾರ್ಪಡಿಸಲಿದ್ದು, ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ನೀಡುವದಾಗಿ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆಂದು ಈ ಸಂದರ್ಭ ಹಾಜರಿದ್ದ ಹಿರಿಯ ಸದಸ್ಯ ಹೆಚ್.ಎಂ. ನಂದಕುಮಾರ್ ತಿಳಿಸಿದರು.

ಈ ಭಾಗದ ನಗರಸಭಾ ಸದಸ್ಯ ಪ್ರಕಾಶ್ ಆಚಾರ್ಯ ಅವರು ಮಾತನಾಡಿ ಮಳೆಗಾಲಕ್ಕೂ ಮುನ್ನ ತಡೆಗೋಡೆ ಕಾಮಗಾರಿ ಪೂರ್ಣಗೊಳಿಸಲಿರುವದಾಗಿ ಹೇಳಿದರು. ಇದೇ ಸಂದರ್ಭ ಈ ವಿಭಾಗದ ಸರ್ವೆ ಕಾರ್ಯವನ್ನೂ ನಡೆಸಲಾಯಿತು.

ಈ ಸಂದರ್ಭ ಯೋಜನೆಯ ತಾಂತ್ರಿಕ ಸಲಹೆಗಾರ ನಿವೃತ್ತ ಕಾರ್ಯಪಾಲಕ ಅಭಿಯಂತರ ಸತ್ಯನಾರಾಯಣರಾವ್, ಹಿರಿಯ ಪತ್ರಕರ್ತ ಜಿ.ಚಿದ್ವಿಲಾಸ್, ಗ್ರೀನ್‍ಸಿಟಿ ಫೋರಂನ ಚೆಯ್ಯಂಡ ಸತ್ಯ, ನಗರಸಭಾ ಆಯುಕ್ತ ರಮೇಶ್, ಡಾ. ನಾಗರಾಜ್ ಪಾಲ್ಗೊಂಡಿದ್ದರು.