ಕೊಡಗಿನಲ್ಲಿ ಧಾರ್ಮಿಕ ಕೇಂದ್ರಗಳಿಗೆ ಕೊರತೆಯೇನಿಲ್ಲ. ಆಯಾಯ ಧರ್ಮದ ಆಚಾರ-ವಿಚಾರ ಪದ್ಧತಿ-ಪರಂಪರೆಗಳಿಗೆ ಅನುಗುಣವಾಗಿ ಪೂಜೆ, ಪ್ರಾರ್ಥನೆ, ಉತ್ಸವಗಳನ್ನು ನಡೆಸುವದು ರೂಢಿ.

ಆದರೆ ಕೊಡಗು ಜಿಲ್ಲೆಯ ನಾಪೆÇೀಕ್ಲು ಸಮೀಪದ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ದರ್ಗಾ ಎಲ್ಲ ಧರ್ಮಿಯರ ಭಾವ್ಯಕ್ಯತೆಯ ಪ್ರತೀಕ ಎಂದರೆ ಅಚ್ಚರಿಯೇನಿಲ್ಲ. ಇದು ಕೊಡಗಿನಲ್ಲಿರುವ, ಮುಸ್ಲಿಂ ಧಾರ್ಮಿಕ ಕೇಂದ್ರಗಳಲ್ಲಿ ಪ್ರಮುಖವಾದುದು. ಉರೂಸ್ ಸಂದರ್ಭದಲ್ಲಿ ರಾಜ್ಯ, ಅಂತರರಾಜ್ಯ ಹಾಗೂ ವಿದೇಶದ ಕೊಲ್ಲಿ ರಾಷ್ಟ್ರಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು, ಯಾತ್ರಾರ್ಥಿಗಳು ಬಂದು ಸೇರುವದರೊಂದಿಗೆ ಇಲ್ಲಿ ಜನ ಸಾಗರವೇ ಭಾವೈಕ್ಯಗೊಳ್ಳುತ್ತದೆ.

ಐತಿಹ್ಯ: ನೂರಾರು ವರ್ಷಗಳ ಹಿಂದೆ ಹಝರತ್ ಸೂಫಿ ಶಹೀದ್ ವಲಿಯುಲ್ಲಾರವರು ಎಮ್ಮೆಮಾಡು ಸಮೀಪದ ಬರಾಕೊಲ್ಲಿ ಎಂಬ ಸ್ಥಳದಲ್ಲಿ ಮರಣ ಶಯ್ಯೆಯಲ್ಲಿದ್ದ ಸಂದರ್ಭ ಎಮ್ಮೆಮಾಡು ಗ್ರಾಮದ ಮಣವಟ್ಟಿರ ಕೊಡವ ಕುಟುಂಬಕ್ಕೆ ಸೇರಿದ ಹಸುವೊಂದು ಕಟ್ಟಿದ ಹಗ್ಗವನ್ನು ತಾನಾಗಿಯೇ ತುಂಡರಿಸಿ ಬಂದು ಈ ಮಹಾಪುರುಷನಿಗೆ ಹಾಲುಣಿಸಿತೆಂದು ಇತಿಹಾಸವಿದೆ. ಅದರ ಕುರುಹು ಎಂಬಂತೆ ಇಂದಿಗೂ ಕಲ್ಲು ಬಂಡೆಯ ಮೇಲೆ ಹಸುವಿನ ಹಗ್ಗದ ಗುರುತು ಹಾಗೂ ಹಸುವಿನ ಗೊರಸಿನ ಗುರುತನ್ನು ಸಹ ಕಾಣಬಹುದಾಗಿದೆ. ಈ ಪ್ರಸಂಗಕ್ಕೆ ಸಾಕ್ಷಿ ಎಂಬಂತೆ ಜಾನುವಾರುಗಳ ರೋಗಕ್ಕೆ ಇಲ್ಲಿ ಪ್ರಾರ್ಥಿಸಿದರೆ ಶೀಘ್ರ ಪರಿಹಾರ ದೊರೆಯುವದು ಎನ್ನುವ ನಂಬಿಕೆ ಜನರಲ್ಲಿದೆ. ಇದಕ್ಕೆ ಪೂರಕ ಎಂಬಂತೆ ಇಡೀ ಎಮ್ಮೆಮಾಡು ಗ್ರಾಮದಲ್ಲಿ ಗೋಹತ್ಯೆ ನಿಷೇಧಿಸಲಾಗಿದೆ. ಗೋಹತ್ಯೆ ಮಾಡಿದವರಿಗೆ ಮಾರಕ ರೋಗ ಬರುತ್ತದೆ ಎಂಬ ನಂಬಿಕೆಯನ್ನು ಸಹ ಇಲ್ಲಿ ಕಾಣಬಹುದಾಗಿದೆ.

ವಿಶೇಷತೆ: ಹಿಂದೂ ಮುಸ್ಲಿಂ ಭಾವೈಕ್ಯತೆಯೇ ಈ ಉರೂಸ್‍ನ ವಿಶೇಷತೆ. ಇಲ್ಲಿ ಹಿಂದೂ ಮುಸ್ಲಿಂ ಎಂಬ ಭೇದ ಭಾವವಿಲ್ಲದೆ ಎಲ್ಲರೂ ಸಂಭ್ರಮದಿಂದ ಉರೂಸ್‍ನಲ್ಲಿ ಪಾಲ್ಗೊಳ್ಳುತ್ತಾರೆ. ಹಿಂದೆ ಇಲ್ಲಿ ನಡೆಯುವ ಉರೂಸ್‍ಗೆ ಮಣವಟ್ಟಿರ ಕುಟುಂಬಸ್ಥರು ಚಾಲನೆ ನೀಡಿ, ಈ ಸಂಭ್ರಮಕ್ಕೆ ಮೆರಗು ನೀಡುತ್ತಿದ್ದರು. ಆದರೆ ಈ ಕ್ರಮ ಈಗ ಇಲ್ಲಿ ಕಂಡು ಬರುವುದಿಲ್ಲ.

ಹಝರತ್ ಹಸನ್ ಸಖಾಫ್ ಅಲ್‍ಹಳ್‍ರಮಿ ತಂಙಳ್: ಸೂಫಿ ಶಹೀದ್ ದರ್ಗಾ ಶರೀಫ್ ದರ್ಶನಕ್ಕೆಂದು ಆಗಮಿಸಿದ ಅದೂರಿನ ಸಯ್ಯದ್ ಹಸನ್ ಸಖಾಫ್ ಆಲ್‍ಹಳ್‍ರಮಿ ತಂಙಳ್ ಮಹಮ್ಮದ್ ಪೈಗಂಬರರ ವಂಶಸ್ಥರಾಗಿದ್ದು, ನನಗೆ ನಿಮ್ಮೊಂದಿಗೆ ಅಂತಿಮ ವಿಶ್ರಾಂತಿಗೆ ಅನುವು ಮಾಡಿಕೊಡಬೇಕೆಂದು ಸೂಫಿ ಶಹೀದ್ ಅವರನ್ನು ಕೋರಿಕೊಂಡರಂತೆ. ಇವರ ಕೋರಿಕೆಯನ್ನು ಸ್ವೀಕರಿಸಿದ ಸೂಫಿ ಶಹೀದ್ ಇವರಿಗೆ ತನಗಿಂತಲೂ ಎತ್ತರದ ಸ್ಥಾನ ನೀಡಿ ಗೌರವಿಸಿರುವುದಕ್ಕೆ ದರ್ಗಾ ಶರೀಫ್ ಮೆಟ್ಟಲಿಳಿದು ಸಾಗುವ ಬಲಭಾಗದಲ್ಲಿ ಕಂಡು ಬರುವ ಕಟ್ಟಡವೇ ಸಾಕ್ಷಿಯಾಗಿದೆ.

ಶ್ರೀಮಂತ ದರ್ಗಾ ಎಂಬ ಖ್ಯಾತಿ: ಎಮ್ಮೆಮಾಡು ದರ್ಗಾವು ಶ್ರೀಮಂತ ದರ್ಗಾವೆಂದೇ ಖ್ಯಾತಿಗಳಿಸಿದೆ. ಇಲ್ಲಿಗೆ ಭೇಟಿ ನೀಡುವ ಲಕ್ಷಾಂತರ ಜನರೊಂದಿಗೆ ಹಣದ ಮಹಾಪೂರವೇ ಇಲ್ಲಿಗೆ ಹರಿದು ಬರುತ್ತಿದೆ. ಇಲ್ಲಿನ ದರ್ಗಾದ ಹಾಗೂ ಜಮಾಅತ್‍ನ ಉಸ್ತುವಾರಿಯನ್ನು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಹಾಗೂ ಸರಕಾರದ ವಕ್ಫ್ ಬೋರ್ಡ್‍ನ ಜಂಟಿ ಸಹಯೋಗದೊಂದಿಗೆ ಆಡಳಿತ ನಡೆಸಲಾಗುತ್ತಿದೆ. ಇಲ್ಲಿ ಸಂಗ್ರಹವಾಗುವ ಹಣದಿಂದ ಭಕ್ತಾದಿಗಳ ಅನುಕೂಲಕ್ಕಾಗಿ ಮೂಲ ಸೌಕರ್ಯಗಳನ್ನು ಒದಗಿಸುವದರೊಂದಿಗೆ, ಬಡಮಕ್ಕಳ ಅನಾಥಾಲಯ ಹಾಗೂ ಧಾರ್ಮಿಕ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಈ ಎಮ್ಮೆಮಾಡು ದರ್ಗಾಕ್ಕೆ ಆಗಮಿಸುವ ಭಕ್ತರ ನಂಬಿಕೆ ಹಾಗೂ ಅವರ ವಿಶ್ವಾಸಗಳಿಂದ ಇದು ಇನ್ನೂ ಪ್ರಸಿದ್ಧಿಯ ಉತ್ತುಂಗಕ್ಕೇರುವ ಎಲ್ಲ ಲಕ್ಷಣಗಳೊಂದಿಗೆ ನಾಸ್ತಿಕರ ಕಷ್ಟ ನಿವಾರಿಸುವ ಶ್ರದ್ಧಾ ಭಕ್ತಿಯ ಕೇಂದ್ರವಾಗಿ ಸಂದರ್ಶಕರಿಗೆ ಗೋಚರಿಸುತ್ತಿದೆ ಎಂದೇ ಹೇಳಬಹುದು.

ಹಲವು ರೋಗಗಳಿಗೆ ಮುಕ್ತಿ: ಇಲ್ಲಿ ಬೇಡಿಕೊಂಡರೆ ಹಲವು ರೋಗಗಳಿಗೆ ಪರಿಹಾರ ದೊರೆಯುತ್ತದೆ ಎಂಬ ನಂಬಿಕೆ ಇದೆ. ಮಾನಸಿಕ ರೋಗಿಗಳು ಸೇರಿದಂತೆ ಹಲವು ರೋಗಿಗಳು ಇಲ್ಲಿ ಗುಣಮುಖರಾಗಿ ತೆರಳಿದ್ದಾರೆ ಎನ್ನುತ್ತಾರೆ ಈ ದರ್ಗಾದ ಆಡಳಿತ ಮಂಡಳಿ ಸದಸ್ಯರು.

ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ: ಈ ಕ್ಷೇತ್ರಕ್ಕೆ ಆಗಮಿಸುವ ಮಹಿಳೆಯರು ಪ್ರಾರ್ಥನಾ ವಿಧಿಗಳನ್ನು ಕೈಗೊಳ್ಳಲು ಹಾಗೂ ತಂಗಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆಯಲ್ಲದೆ, ಉರೂಸ್ ಸಂದರ್ಭದಲ್ಲಿ ಊಟದ ವ್ಯವಸ್ಥೆಯನ್ನು ಕೂಡ ಪ್ರತ್ಯೇಕವಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.

ಊಟ ಮತ್ತು ವಸತಿ: ಇಲ್ಲಿ ನಡೆಯುವ ಏಳು ದಿನಗಳ ಉರೂಸ್ ಸಂದರ್ಭದಲ್ಲಿ ಒಂದು ದಿನ ಸಾಮೂಹಿಕ ಅನ್ನದಾನದ ವ್ಯವಸ್ಥೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚು ಭಕ್ತಾದಿಗಳು ಇಲ್ಲಿ ಅನ್ನದಾನ ಸ್ವೀಕರಿಸಿದ ನಿದರ್ಶನಗಳಿವೆ.

ವಿದ್ಯಾಭ್ಯಾಸಕ್ಕೂ ಹೆಚ್ಚಿನ ಪೆÇ್ರೀತ್ಸಾಹ: ಇಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅನಾಥ ಮಕ್ಕಳಿಗೆ ಉಚಿತ ವಸತಿ ಮತ್ತು ವಿದ್ಯಾಭ್ಯಾಸ. ವಿದ್ಯಾರ್ಥಿನಿಯರಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆದ್ಯತೆ. ಮುಂದಿನ ದಿನಗಳಲ್ಲಿ ಅರಬಿ ಕಾಲೇಜು ತೆರೆಯುವ ಬಗ್ಗೆ ಸಮಾಲೋಚನೆಗಳು ನಡೆಯುತ್ತಿವೆ.

? ಪಿ. ವಿ. ಪ್ರಭಾಕರ್-ದುಗ್ಗಳಸದಾನಂದ.