ಮಡಿಕೇರಿ, ಫೆ. 21: ಚಿನ್ನ-ಬೆಳ್ಳಿ ವರ್ತಕರಿಗೆ ಹಾಗೂ ಕೆಲಸಗಾರರಿಗೆ ಇತ್ತೀಚಿನ ಕಾನೂನುಗಳು, ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಕರ್ನಾಟಕ ಚಿನ್ನ-ಬೆಳ್ಳಿ ವರ್ತಕರ ಒಕ್ಕೂಟದ ವತಿಯಿಂದ ರಾಜ್ಯಾದ್ಯಂತ ‘ಸ್ವರ್ಣ ಜ್ಞಾನ’ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದ್ದು, ಅದರಂತೆ ರಾಜ್ಯದ 4ನೇ ಸಮ್ಮೇಳನ ಹಾಗೂ ಕಾರ್ಯಾಗಾರ ತಾ. 24 ರಂದು ಕೊಡಗಿನ ಪಾಲಿಬೆಟ್ಟದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೊಡಗು ಚಿನ್ನ-ಬೆಳ್ಳಿ ವರ್ತಕರ ಹಾಗೂ ಕೆಲಸಗಾರರ ಸಂಘದ ಅಧ್ಯಕ್ಷ ಕೆ.ಕೆ. ಶ್ರೀನಿವಾಸ್, ಈಗಾಗಲೇ ರಾಜ್ಯದ ಮೂರು ಜಿಲ್ಲೆಗಳಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಿ ಕಡ್ಡಾಯ ಹಾಲ್‍ಮಾರ್ಕಿಂಗ್ ಹಾಗೂ ಲೈಸೆನ್ಸ್ ವ್ಯವಸ್ಥೆ, ಇತ್ತೀಚಿನ ಜಿಎಸ್‍ಟಿ ಕಾನೂನು, ಆದಾಯ ತೆರಿಗೆ ಕಾನೂನು, ವಜ್ರಗಳ ಬಗ್ಗೆ ಮಾಹಿತಿ, ಇತೀಚಿನ ಚಿನ್ನಾಭರಣಗಳ ಬಗ್ಗೆ ಮಾಹಿತಿ, ಚಿನ್ನಾಭರಣಗಳ ಲೆಕ್ಕಪತ್ರ ಇಡುವ ಸಾಫ್ಟ್‍ವೇರ್ ಸೇರಿದಂತೆ ಜುವೆಲ್ಲರಿ ಕ್ಷೇತ್ರದಲ್ಲಿನ ಇತ್ತೀಚಿನವರೆಗಿನ ಮಾಹಿತಿಯನ್ನು ವರ್ತಕರಿಗೆ ಹಾಗೂ ಕೆಲಸಗಾರರಿಗೆ ನೀಡಲಾಗಿದೆ ಎಂದು ತಿಳಿಸಿದರು.

ಅದೇರೀತಿ ಕೊಡಗು ಜಿಲ್ಲೆಯ ಚಿನ್ನಬೆಳ್ಳಿ ವರ್ತಕರು ಹಾಗೂ ಕೆಲಸಗಾರರಿಗೆ ಮಾಹಿತಿ ನೀಡುವ ಉದ್ದೇಶದಿಂದ ತಾ. 24 ರಂದು ಪಾಲಿಬೆಟ್ಟದ ಕೂರ್ಗ್ ಕ್ಲಿಪ್ಸ್ ರೆಸಾರ್ಟ್‍ನಲ್ಲಿ ರಾಜ್ಯದ ನಾಲ್ಕನೇ ಸ್ವರ್ಣಜ್ಞಾನ ಕಾರ್ಯಾಗಾರ ಆಯೋಜಿಸಲಾಗಿದ್ದು, ಇದರಲ್ಲಿ ಜಿಲ್ಲೆಯ ಎಲ್ಲಾ ಚಿನ್ನಬೆಳ್ಳಿ ವರ್ತಕರು ಹಾಗೂ ಕೆಲಸಗಾರರು ಭಾಗವಹಿಸಲಿದ್ದಾರೆ.

ಅಂದು ಪೂರ್ವಾಹ್ನ 10 ಗಂಟೆಗೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಬಿ.ಎನ್. ಪ್ರಕಾಶ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕರ್ನಾಟಕ ರಾಜ್ಯ ಚಿನ್ನಬೆಳ್ಳಿ ವರ್ತಕರ ಒಕ್ಕೂಟದ ಅಧ್ಯಕ್ಷ ಜಿ. ಜಯ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಡಾ. ಬಿ.ಆರ್. ರಾಮಾಚಾರಿ, ಖಜಾಂಚಿ ಶ್ರೀಕಾಂತ್ ಕಾರಿ, ಜಂಟಿ ಕಾರ್ಯದರ್ಶಿಗಳಾದ ಒ.ವಿ. ದಿವಾಕರ್, ಕೆ.ಎಸ್. ರಾಜಶೇಖರ್, ಸಲಹಾ ಸಮಿತಿ ಅಧ್ಯಕ್ಷ ಸುಮೇಶ್ ವಧೇರಾ ಅವರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಜಿಲ್ಲಾ ಸಂಘದ ಉಪಾಧ್ಯಕ್ಷ ಹಾಗೂ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಸ್.ಬಿ. ಲೀಲಾರಾಂ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಚಿನ್ನಾಭರಣ ಕಳವು ಪ್ರಕರಣಗಳು ಹೆಚ್ಚುತ್ತಿದ್ದು, ಅಂತಹ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ಯಾವದೇ ಸಾಕ್ಷ್ಯಾಧಾರ ಇಲ್ಲದಿದ್ದರೂ, ಕಳವು ಮಾಡಿದ ವ್ಯಕ್ತಿ ತೋರಿಸಿದ ಅಂಗಡಿ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಚಿನ್ನ-ಬೆಳ್ಳಿ ವರ್ತಕರು ವಿನಾಕಾರಣ ತೊಂದರೆಗೆ ಸಿಲುಕುವಂತಾಗಿದ್ದು, ಈ ಬಗ್ಗೆ ಕಾರ್ಯಾಗಾರದಲ್ಲಿ ಸೂಕ್ತ ಕಾನೂನು ಮಾರ್ಗದರ್ಶನವನ್ನೂ ನೀಡಲಾಗುತ್ತದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಂಘದ ಮಡಿಕೇರಿ ತಾಲೂಕು ಅಧ್ಯಕ್ಷ ಪ್ರಶಾಂತ್ ಎಸ್. ವರ್ಣೇಕರ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಬಿ. ರವಿ ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳು

ಕೊಡಗು ಜಿಲ್ಲಾ ಚಿನ್ನ-ಬೆಳ್ಳಿ ವರ್ತಕರ ಹಾಗೂ ಕೆಲಸಗಾರರ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಕೆ.ಕೆ. ಶ್ರೀನಿವಾಸ್ ಪುನರಾಯ್ಕೆಗೊಂಡಿದ್ದಾರೆ.

ಉಪಾಧ್ಯಕ್ಷರಾಗಿ ಎಸ್.ಬಿ. ಲೀಲಾರಾಂ, ವಿ.ವಿ. ತಿಲಕ್, ಪ್ರಶಾಂತ್ ಎಸ್. ವರ್ಣೇಕರ್, ಕೆ.ಪಿ. ಪ್ರಶಾಂತ್‍ಕುಮಾರ್, ಹೆಚ್. ಗಜಾನನ ಶೇಟ್, ಪ್ರಧಾನ ಕಾರ್ಯದರ್ಶಿಗಳಾಗಿ ಆರ್.ಬಿ. ರವಿ, ಎಸ್.ವಿ. ವೆಂಕಟೇಶ್, ಬಿ.ಎಂ. ಹರೀಶ್, ಖಜಾಂಚಿಯಾಗಿ ತೇಜರಾಜ್ ಹಾಗೂ ಬಿ.ಎಂ. ಪ್ರದೀಪ್ ಆಯ್ಕೆಗೊಂಡಿದ್ದಾರೆ.

ನಿರ್ದೇಶಕರಾಗಿ ಶಾಂತಿಲಾಲ್, ಬಿ.ಎಂ. ರಾಜೇಶ್, ಜಗದೀಶ್ ಚೌಧರಿ, ಓಂಪ್ರಕಾಶ್ ಚೌಧರಿ, ಎ.ಎಸ್. ಪ್ರಕಾಶ್ ಆಚಾರ್ಯ, ಬಿ.ವಿ. ರೋಷನ್, ಮೋಹನ್‍ಲಾಲ್ ಚೌಧರಿ, ಚೆಲಾರಾಂ ಚೌಧರಿ, ಕಾಂತರಾಜ್, ಮುಖೇಶ್ ಜೈನ್ ಅವರುಗಳು ನೇಮಕಗೊಂಡಿದ್ದಾರೆ ಎಂದು ಅಧ್ಯಕ್ಷ ಕೆ.ಕೆ. ಶ್ರೀನಿವಾಸ್ ತಿಳಿಸಿದ್ದಾರೆ.