ಗೋಣಿಕೊಪ್ಪ ವರದಿ, ಫೆ. 7 : ವಿವಿಧ ಇಲಾಖೆಗಳ ಮೂಲಕ ಅನುಷ್ಠಾನಗೊಳ್ಳಬೇಕಿರುವ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಗೆ ಪೂರಕವಾದ ಕ್ರಿಯಾಯೋಜನೆಯನ್ನು ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯಾ ಸೂಚನೆ ನೀಡಿದರು.

ಪೊನ್ನಂಪೇಟೆ ಸಾಮಥ್ರ್ಯಸೌಧದಲ್ಲಿ ವೀರಾಜಪೇಟೆ ತಾಲೂಕು ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಉದ್ಯೋಗಖಾತ್ರಿ ಯೋಜನೆಗೆ ಕೇಂದ್ರದಿಂದ ಅನುದಾನ ವಿಳಂಬವಾಗಿದೆ. ಇದರಿಂದಾಗಿ ರಾಜ್ಯದಿಂದ ಹಣ ಪಡೆದು ಸಧ್ಯದಲ್ಲಿಯೇ ಉಳಿದ ಬಾಕಿ ಹಣವನ್ನು ಜಮೆ ಮಾಡಲಾಗುತ್ತಿದೆ. ಇದರಿಂದಾಗಿ ಅನುಷ್ಠಾನಗೊಳಿಸಬೇಕಾದ ಕಾಮಗಾರಿಗಳನ್ನು ಪೂರೈಸಿ ಅಭಿವೃದ್ಧಿಗೆ ಮುಂದಾಗಬೇಕು. ಮುಂದಿನ ಕ್ರಿಯಾಯೋಜನೆಯಲ್ಲಿಯೂ ಉದ್ಯೋಗಖಾತ್ರಿ ಯೋಜನೆಯಡಿ ಕಾಮಗಾರಿ ಅನುಷ್ಠಾನಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಉದ್ಯೋಗಖಾತ್ರಿ ಯೋಜನೆಯಡಿ ಮಾನವ ದಿನಗಳ ಸೃಜನೆಯನ್ನು ಸಮರ್ಪಕವಾಗಿ ಕಾಪಾಡಿಕೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಭಿವೃಧ್ಧಿಗೆ ಒತ್ತು ನೀಡಲು ಇದು ಕೂಡ ಮುಖ್ಯ ಎಂದರು. ಕುಟ್ಟ ವ್ಯಾಪ್ತಿಯಲ್ಲಿ ಶೌಚಗೃಹ ನಿರ್ಮಾಣಕ್ಕೆ ಗುರುತಿಸಿರುವ ಫಲಾನುಭವಿಗಳೇ ಗ್ರಾಮದಲ್ಲಿ ಇಲ್ಲದ ಕಾರಣ ತೊಂದರೆಯಾಗಿದೆ ಎಂದು ಪಿಡಿಒ ಮಾಹಿತಿ ನೀಡಿದರು.

ಉದ್ಯೋಗ ಖಾತ್ರಿಯ ಆರ್ಥಿಕ ಸಾಧನೆ, ಮಾನವ ದಿನಗಳ ಸೃಜನೆ, ಒಗ್ಗೂಡುವಿಕೆ ಪ್ರಗತಿ, 2016-17 ನೇ ಸಾಲಿನ ಕೂಲಿ ಬಾಕಿ, ಜಿಯೋ ಟ್ಯಾಗಿಂಗ್, ಆಧಾರ್ ಆಧಾರಿತ ಪಾವತಿ ಪ್ರಗತಿ, ವೈಯಕ್ತಿಕ ಖಾತೆ ತೆರೆಯುವ ಬಗ್ಗೆಗಿನ ಪ್ರಗತಿ ಪರಿಶೀಲನೆ ನಡೆಸಿದರು.

ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ಘನತ್ಯಾಜ್ಯ ವಿಲೇವಾರಿ ಘಟನೆ ಸ್ಥಾಪಿಸಲು ಜಾಗ ಗುರುತಿಸಿಕೊಳ್ಳುವಂತೆ ಸೂಚನೆ ನೀಡಿದರು. ಗ್ರಾಮದ ಸರ್ಕಾರಿ ಜಾಗವನ್ನು ಗುರುತಿಸಿ ತಹಶೀಲ್ದಾರ್ ಮೂಲಕ ಪಂಚಾಯಿತಿಗೆ ವರ್ಗಾವಣೆ ಮಾಡಿಕೊಂಡು ಕಸನಿರ್ವಹಣೆಗೆ ಹೆಚ್ಚು ಒತ್ತು ನೀಡುವಂತೆ ಸಲಹೆ ನೀಡಿದರು.

ದೇವರಪುರ ಗ್ರಾಮದಲ್ಲಿ ಅಕ್ರಮವಾಗಿ ಕಸ ಸುರಿಯುವದರಿಂದ ಗ್ರಾಮದ ಸ್ವಚ್ಛತೆಗೆ ತೊಂದರೆಯಾಗುತ್ತಿದೆ ಎಂದು ಸ್ವಚ್ಛ ಭಾರತ್ ಯೋಜನೆ ಅಧಿಕಾರಿ ಸೂರಜ್ ಹೇಳಿದರು. ಅಲ್ಲಿಗೆ ಯಾರು ನುಸುಳದಂತೆ ಎತ್ತರ ಬೇಲಿ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ಮನವಿ ಮಾಡಿಕೊಂಡರು.

ಸರ್ಕಾರ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ಫಲಾನುಭವಿಗಳಲ್ಲಿ ಪಡಿತರ ಚೀಟಿ ಇಲ್ಲದಿರುವದರಿಂದ ತೊಡಕುಂಟಾಗುತ್ತಿದೆ. ತಾಲೂಕು ಕಾರ್ಯನಿರ್ವಹಣಾಧಿಕಾರಿ ಈ ಬಗ್ಗೆ ವಿಶೇಷ ಗಮನ ಹರಿಸಿ, ಪಡಿತರ ಗೊಂದಲ ಸುಧಾರಿಸಲು ಮುಂದಾಗಬೇಕು. ಪಡಿತರ ಇಲ್ಲದವರಿಗೆ ಪಡಿತರ ಚೀಟಿ ನೀಡಬೇಕು ಎಂದು ಸೂಚಿಸಿದರು.

ತೋಟಗಾರಿಕಾ ಇಲಾಖೆ ವತಿಯಿಂದ ಮುಂದಿನ ಕಾರ್ಯಯೋಜನೆ ಬಗ್ಗೆ ಕ್ರಿಯಾಯೋಜನೆ ರೂಪಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಯೋಜನೆ ರೂಪಿಸುವಂತೆ ಸೂಚಿಸಿದರು. ಕುಡಿಯುವ ನೀರು ಯೋಜನೆ ಅನುಷ್ಠಾನದಲ್ಲಿ ಈಗಾಗಲೇ 39 ಕೊಳವೆ ಬಾವಿ ಕೊರೆಸುವ ಕೆಲಸ ಪೂರ್ಣಗೊಳ್ಳಬೇಕಿತ್ತು, ವಿಳಂಬವಾಗಿರುವ ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಆಡಳಿತ ಸಹಾಯಕ ಕಾರ್ಯದರ್ಶಿ ಹೆಚ್. ಎಸ್. ಬಾಬು, ಅಭಿವೃದ್ಧಿ ಅಧಿÀಕಾರಿ ಶ್ರೀಕಂಠಮೂರ್ತಿ ಹಾಗೂ ಇಒ ಜಯಣ್ಣ ಉಪಸ್ಥಿತರಿದ್ದರು. ತಾಲೂಕು ವಿವಿಧ ಇಲಾಖೆ ಅಧಿಕಾರಿಗಳು, ಗ್ರಾ. ಪಂ. ಅಭಿವೃಧ್ಧಿ ಅಧಿಕಾರಿಗಳು ಪಾಲ್ಗೊಂಡಿದ್ದರು. -ಸುದ್ದಿಪುತ್ರ