ಸೋಮವಾರಪೇಟೆ, ಫೆ.6: ಹೊಯ್ಸಳರ ಕಾಲದಲ್ಲಿ ನಿರ್ಮಿಸ ಲ್ಪಟ್ಟಿರುವ ಸಮೀಪದ ಗೆಜ್ಜೆಹಣಕೋಡು ಗ್ರಾಮದ ಶ್ರೀ ಸೋಮೇಶ್ವರ ದೇವಾಲಯದ ಲೋಕಾರ್ಪಣೆ ತಾ. 7ರಂದು (ಇಂದು) ನೆರವೇರಲಿದೆ.
ಸುಮಾರು 40ಲಕ್ಷ ವೆಚ್ಚದಲ್ಲಿ ನೂತನ ದೇವಾಲಯವನ್ನು ನಿರ್ಮಿಸಲಾಗಿದ್ದು, ಕಾರ್ಕಳದಿಂದ ನಂದಿ, ಕನ್ನಂಬಾಡಿ ಅಮ್ಮ, ಗಣಪತಿ ವಿಗ್ರಹಗಳನ್ನು ತರಲಾಗಿದೆ.
ಬುಧವಾರದಂದು ದೇವಾಲಯ ದಲ್ಲಿ ಗಂಗಾಪೂಜೆ, ಮಂಗಳವಾದ್ಯ, ವೀರಗಾಸೆಯೊಂದಿಗೆ ನೂತನ ಶಿಲಾಮೂರ್ತಿಗಳ ಗ್ರಾಮ ಪ್ರದಕ್ಷಿಣೆ, ಮಹಾ ಗಣಪತಿ ಪೂಜೆ, ವಾಸ್ತುಪೂಜೆ, ದ್ವಾರಪೂಜೆ, ಪುಣ್ಯಾಹ, ನಾಂದಿ, ಪಂಚಕಳಸ, ರಕ್ಷಾಬಂಧನ, ಅಂಕುರಾರೋಪಣ, ನವಗ್ರಹ, ಮೃತ್ಯುಂಜಯ, ಪಂಚಕಳಸ ಸ್ಥಾಪನೆ ಸೇರಿದಂತೆ ಇತರ ಪೂಜಾ ಕೈಂಕರ್ಯಗಳನ್ನು ನಡೆಸುವ ಮೂಲಕ ದೇವಾಲಯ ಲೋಕಾರ್ಪಣಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ತಾ. 7ರಂದು (ಇಂದು) ಬ್ರಾಹ್ಮೀ ಮುಹೂರ್ತದಲ್ಲಿ ಗಣಪತಿ ಪೂಜೆ, ನೂತನ ಪ್ರತಿಷ್ಠಾಪಿತ ವಿಗ್ರಹಗಳಿಗೆ ಪ್ರಾಣಪ್ರತಿಷ್ಠೆ, ರುದ್ರಾಭಿಷೇಕ, ಹೋಮ, ಮಹಾಪೂರ್ಣಾಹುತಿ, ರಕ್ಷಾಧಾರಣೆ, ಮಹಾಕುಂಭಾಭಿಷೇಕ, ಮಹಾಬಲಿ, ಅಷ್ಟೋತ್ತರ, ಮಹಾಮಂಗಳಾರತಿ ನೆರವೇರಲಿದೆ.
ಪೂರ್ವಾಹ್ನ 10 ಗಂಟೆಗೆ ನೂತನ ದೇವಾಲಯದ ಉದ್ಘಾಟನೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ದಿವ್ಯ ಸಾನ್ನಿಧ್ಯ ವಹಿಸಿ ನೂತನ ದೇವಾಲಯವನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆ, ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ, ವಿರಕ್ತ ಮಠಾಧೀಶರಾದ ಶ್ರೀ ವಿಶ್ವೇಶ್ವರ ಸ್ವಾಮೀಜಿ, ಸರ್ಪಭೂಷಣ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕ ಅಪ್ಪಚ್ಚು ರಂಜನ್, ಮಾಜೀ ಸಚಿವ ಬಿ.ಎ. ಜೀವಿಜಯ ಸೇರಿದಂತೆ ಜಿಲ್ಲೆಯ ವಿವಿಧ ಮಠಾಧಿಪತಿಗಳು ಭಾಗವಹಿಸಲಿದ್ದಾರೆ.
ತಾ. 8ರಂದು (ನಾಳೆ) ಪೂರ್ವಾಹ್ನ 9 ರಿಂದ 12 ಗಂಟೆಯವರೆಗೆ ನೂತನ ಪ್ರತಿಷ್ಠಾಪಿತ ಕನ್ನಂಬಾಡಿ ಅಮ್ಮನವರಿಗೆ ಉಡಿ ತುಂಬುವ ಕಾರ್ಯ ಜರುಗಲಿದ್ದು, ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ. ದೇವಾಲಯದಲ್ಲಿ 3 ದಿನಗಳ ಕಾಲ ದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದು ವೇದಾಂತಯ್ಯ ಅವರು ತಿಳಿಸಿದ್ದಾರೆ.