ಮಡಿಕೇರಿ, ಜ. 28: ಕನ್ನಡನಾಡಿನಲ್ಲಿ ‘ಯೋಗ ಪಾಠಶಾಲೆ’ಯನ್ನು ಮೊದಲಿಗೆ ಮೈಸೂರು ರಾಜಮನೆತನದ ಪೂರ್ವಜರು ಆರಂಭಿಸಿದರು ಎಂದು ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿವರಣೆ ನೀಡಿದರು. ನಗರದಲ್ಲಿ ಜರುಗಿದ 2 ದಿನಗಳ ನಗೆ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಅವರು, ನಗು ಸಮ್ಮೇಳನಕ್ಕೆ ತಾನು ‘ರಾಜ ಗಾಂಭೀರ್ಯದಲ್ಲಿ ಬರುವಂತಿಲ್ಲ. ಇಂದಿನ ಕಾರ್ಯಕ್ರಮ ನನಗೆ ಪ್ರಥಮ ಅನುಭವ. ಇಲ್ಲಿ ನನಗೆ ಪ್ರೀತಿ ಪೂರ್ವಕ ಸ್ವಾಗತ ದೊರೆಯಿತು. ಇಂದಿನ ಕಾರ್ಯಕ್ರಮ ನನಗೆ ಕುತೂಹಲಕಾರಿಯಾಗಿತ್ತು. ಯಾವದೇ ನಿರೀಕ್ಷೆ ಇಲ್ಲದೆ ಭಾಗವಹಿಸಿದ್ದೇನೆ. ಹೊಸ ಆವಿಷ್ಕಾರ ನನಗೆ ಇಷ್ಟ. ಇಲ್ಲಿ ಬಂದ ನಂತರ ನಗೆಯೋಗದ ನೈಜ ಮಾಹಿತಿ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಮಡಿಕೇರಿ ಕ್ರಿಸ್ಟಲ್ ಹಾಲ್ನಲ್ಲಿ ಕರ್ನಾಟಕ ನಗೆಯೋಗ ಕೂಟಗಳ ಒಕ್ಕೂಟದ ನೇತೃತ್ವದಲ್ಲಿ ರಾಜ್ಯಮಟ್ಟದ 17ನೇ ನಗೆ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಬಗ್ಗೆ ಯದುವೀರ್ ಒಡೆಯರ್ ಸಂತಸ ವ್ಯಕ್ತಪಡಿಸಿದರು. ಋಷಿ ಮುನಿಗಳಲ್ಲಿ ಮಾತ್ರ ಕೇಂದ್ರೀಕೃತವಾಗಿದ್ದ ಯೋಗ, ಕಾಶ್ಮೀರದಿಂದ ಬನಾರಸ್ಗೆ ನಂತರ ಯೋಗ ಗುರು
(ಮೊದಲ ಪುಟದಿಂದ) ಕೃಷ್ಣಮಾಚಾರ್ಯ ಅವರ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆ ಸಂದರ್ಭ ಮೈಸೂರು ಅರಮನೆಯ ಸಂಸ್ಕøತ ಪಾಠಶಾಲೆಯಲ್ಲಿ ಮೊದಲಿಗೆ ಆರಂಭಗೊಂಡಿತು.
ಯೋಗದಿಂದ ಪ್ರಾಣಕ್ಕೆ ಮತ್ತು ಮಾನಸಿಕ ಆರೋಗ್ಯಕ್ಕೆ ಹೆಚ್ಚು ಲಾಭವಿದೆ ಎಂದು ಮನಗಂಡ ರಾಜಮನೆತನ ಕನ್ನಡ ನಾಡಿನಲ್ಲಿ ಮೊದಲ ಪಾಠಶಾಲೆಯನ್ನು ಮೈಸೂರಿನಲ್ಲಿ ಆರಂಭಿಸಿತು ಎಂದರು. ದಿ. ಬಿ.ಕೆ. ಶಂಕರ್ ಅಯ್ಯಂಗಾರ್ ಮತ್ತು ದಿ. ಪಟ್ಟಾಭಿ ಜೋಯಿಸರು ಮಾದರಿ ಯೋಗ, ಪತಂಜಲಿ ಯೋಗದ ಸೂತ್ರಧಾರಿಗಳು ಎಂದು ಯದುವೀರ್ ವರ್ಣಿಸಿದರಲ್ಲದೆ, ನಗೆಯೋಗ ಎಲ್ಲೆಡೆ ಪಸರಿಸಲಿ ಎಂದು ಶುಭ ಕೋರಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ, ಭಾರತದ 14 ಭಾಷೆಗಳ ಪರಿಣತಿ ಹೊಂದಿರುವ ಹೋಮಿಯೋಪತಿ ವೈದ್ಯ ಡಾ. ಬಿ.ಡಿ. ಪಟೇಲ್ ಅವರು, ‘ಗುಡ್ಮಾರ್ನಿಂಗ್’ ನಮ್ಮ ಸಂಸ್ಕøತಿಯಲ್ಲ ‘ಶುಭೋದಯ’ ಎಂದು ಹೇಳುವದು ನಮ್ಮ ಆಚಾರವಾಗಬೇಕು. ಭಾರತದ ಮೇಲೆ ಬ್ರಿಟೀಷರ ಪ್ರಭಾವ ಬೀರಿದ ನಂತರ ಕಳೆದ 100 ವರ್ಷಗಳಿಂದೀಚೆಗೆ ‘ಶೇಕ್ ಹ್ಯಾಂಡ್’ ಮಾಡುವದು ಹೆಚ್ಚುತ್ತಿದೆ. ಅದರಲ್ಲಿಯೂ ‘ಕೈ ಕೊಡುವದರಲ್ಲಿ’ ಯುವತಿಯರೇ ಮುಂದಿದ್ದಾರೆ. ‘ನಮಸ್ತೆ’ ನಮ್ಮ ಸಂಸ್ಕಾರ. ಬಾಗಿ ನಮಸ್ಕರಿಸುವದರಿಂದ ದೇಹಕ್ಕೆ ಚೈತನ್ಯ ತುಂಬುತ್ತದೆ. ಭಾರತದ ‘ನಮಸ್ತೆ’ ಪದ್ಧತಿಯನ್ನು ವಿದೇಶಗಳಲ್ಲಿ ಹೆಚ್ಚಾಗಿ ಅಳವಡಿಸಿಕೊಳ್ಳಲಾಗಿದೆ. ಮನಸ್ಸಿನ ಪ್ರಶಾಂತತೆಗೆ ‘ನಮಸ್ತೆ’ ಅಗತ್ಯ. ಸಂಶೋಧನೆಯಲ್ಲಿ ‘ನಮಸ್ತೆ’ ಆರೋಗ್ಯಕರ ಎಂದು ದೃಢಪಟ್ಟಿರುವದಾಗಿ ಹೇಳಿದರು.
ಕೊಡಗಿನ ಸಾಹಿತಿ ಗೀತಾ ಮಂದಣ್ಣ ಅವರು, ನಗೆ ಸಮ್ಮೇಳನ ತಮಗೆ ಪ್ರಥಮ ಅನುಭವ ಎಂದು ಹೇಳಿದರಲ್ಲದೆ, ಕೌಟುಂಬಿಕ ವ್ಯವಸ್ಥೆಯಲ್ಲಿ ಇಂದು ಮಾನಸಿಕ ಒತ್ತಡ ಅಧಿಕಗೊಂಡು ನಗೆ ಮಾಯವಾಗುತ್ತಿದೆ. ಕುಡಿಯುವ ನೀರಿಗೆ ಬರ ಬಂದಂತೆ ಇಂದು ನಗುವನ್ನು ಹುಡುಕುತ್ತಾ ಹೋಗಬೇಕಾಗಿದೆ. ಮನೆಯಲ್ಲಿಂದು ಮೊಬೈಲ್ ಬಳಕೆ ಅತಿಯಾಗಿದ್ದು, ಮಕ್ಕಳೊಂದಿಗೆ ನಗಲು ಪೋಷಕರಿಗೆ ಬಿಡುವು ಇಲ್ಲದಾಗಿದೆ. ಧಾವಂತ ಬದುಕಿನಲ್ಲಿ ನಗು ಮಾಯವಾಗಿದೆ. ಪ್ರಕೃತಿದತ್ತವಾದ ನಗುವನ್ನು ನಾವೆಲ್ಲಾ ಮರೆಯುತ್ತಿದ್ದೇವೆ. ಐಷಾರಾಮಿ ಬದುಕು, ದುಂದುವೆಚ್ಚ ಕೈ ಬಿಟ್ಟು ನೈಸರ್ಗಿಕವಾಗಿ ನಗುವನ್ನು ರೂಢಿಸಿಕೊಳ್ಳೋಣ ಎಂದರು.
ಅಂತರ್ರಾಷ್ಟ್ರೀಯ ನಗೆಯೋಗ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಮದನ್ ಕಟಾರಿಯಾ ಅವರು, ನಗುಯೋಗ ಕೆಲವು ಆಯಾಮವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಭಾರತವಲ್ಲದೆ ಬೆಲ್ಜಿಯಂ, ರಷ್ಯಾ, ಡೆನ್ಮಾರ್ಕ್, ಇರಾನ್, ಅರಬ್ ರಾಷ್ಟ್ರಗಳು, ಮಲೇಷಿಯಾ ಒಳಗೊಂಡಂತೆ ಶಾಲಾ - ಕಾಲೇಜುಗಳಲ್ಲಿ, ಶಾಫಿಂಗ್ ಮಾಲ್ಗಳಲ್ಲಿ ಕಂಪೆನಿಗಳಲ್ಲಿ ವಿಯೆಟ್ನಾಂ ದೇಶದ ಪೊಲೀಸ್ ತರಬೇತಿಗಳಲ್ಲಿ ನಗುಯೋಗ ಹೆಚ್ಚು ಪ್ರಚಲಿತವಾಗಿದೆ ಎಂದರು.
ಸಭೆಯಲ್ಲಿ ಖ್ಯಾತ ವೈದ್ಯ ಡಾ. ಟಿ. ಅಂಜನಪ್ಪ, ಕರ್ನಾಟಕ ನಗೆಕೂಟಗಳ ಅಧ್ಯಕ್ಷ ಪ್ರೊ. ಪಿ. ಸದಾಶಿವ್ ಮಾತನಾಡಿದರು. ಕರ್ನಾಟಕ ನಗೆಯೋಗ ಕೂಟಗಳ ಒಕ್ಕೂಟ ಅಧ್ಯಕ್ಷ ಪನ್ನಗ ಶಯನಂ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ, ದೇವನಹಳ್ಳಿ ನಗೆ ವಿಶ್ವ ವಿದ್ಯಾನಿಲಯದ ಮುಖ್ಯಸ್ಥರಾದ ಮಾಧುರಿ ಕಟಾರಿಯಾ, ಒಕ್ಕೂಟ ನಿರ್ದೇಶಕರಾದ ರಾಜೇಶ್ವರಿ, ಪಾರ್ವತಿ, ಖಜಾಂಚಿ ಪುಷ್ಪಾ ಸುಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಸಂಸ್ಥೆಯ ಪಿಆರ್ಓ ನಾಗರತ್ನ ಸತೀಶ್ ಪ್ರಾರ್ಥನೆ, ಸಮ್ಮೇಳನಾಧ್ಯಕ್ಷ ಪಿ. ನಾಗೇಶ್ ಸ್ವಾಗತ ಹಾಗೂ ಪನ್ನಗ ಶಯನಂ ವಂದನಾರ್ಪಣೆ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಮಹಾರಾಜ ಯದುವೀರ್ ಒಡೆಯರ್ ಒಳಗೊಂಡಂತೆ ಹಲವರನ್ನು ಸನ್ಮಾನಿಸಲಾಯಿತು. ಮಡಿಕೇರಿ ಎಫ್ಎಂಸಿ ಕಾಲೇಜು ವಿದ್ಯಾರ್ಥಿ ನಿಯರು, ಮಾಜಿ ಕೊಡವ ಅಕಾಡೆಮಿ ಅಧ್ಯಕ್ಷೆ ರಾಣಿ ಮಾಚಯ್ಯ ನಿರ್ದೇಶನದಲ್ಲಿ ಆಕರ್ಷಕ ಉಮ್ಮತ್ತಾಟ್ ಪ್ರದರ್ಶನ ನೀಡಿದರು.
- ವರದಿ : ಟಿ.ಎಲ್. ಶ್ರೀನಿವಾಸ್