ಶನಿವಾರಸಂತೆ, ಜ. 28: ಗುಡುಗಳಲೆ ಶ್ರೀ ಜಯದೇವ ಜಾತ್ರಾ ಮಹೋತ್ಸವವು ಸೋಮವಾರ ಆರಂಭವಾಯಿತು. ಗುಡುಗಳಲೆ ಗ್ರಾಮದ ಬಸವೇಶ್ವರ ದೇವರ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿರಿಸಿ, ಮಂಗಳವಾದ್ಯದೊಂದಿಗೆ ಜಾನುವಾರು ಹಾಗೂ ವೀರಗಾಸೆ ಕುಣಿತದೊಂದಿಗೆ ಜಾತ್ರಾ ಮೈದಾನಕ್ಕೆ ತಂದು ಅಲ್ಲಿನ ದೇವಾಲಯದಲ್ಲಿ ಪ್ರತಿಷ್ಠಾಪಿಸ ಲಾಯಿತು.ಶ್ರೀ ಜಯದೇವ ಜಾನುವಾರುಗಳ ಜಾತ್ರೆಯನ್ನು ಉದ್ಘಾಟಿಸಿದ ಸಹಾಯಕ ಠಾಣಾಧಿಕಾರಿ ಚೆಲುವರಾಜ್ ಮಾತನಾಡಿ, ಜಾತ್ರೆ ಸಮಾರಂಭ ಶಾಂತಿಯುತವಾಗಿ ನಡೆಯಬೇಕು. ಸಾರ್ವಜನಿಕರ ಸಹಕಾರ ಅಗತ್ಯ, ಪೊಲೀಸರ ಸಹಕಾರ ಪ್ರತಿಕ್ಷಣವು ಇದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಾತ್ರಾ ಸಮಿತಿಯ ಅಧ್ಯಕ್ಷ ಎಂ.ಎಸ್. ಶಿವಕುಮಾರ್ ಜಾತ್ರೆಗಳು ಜನಪದ ಸಂಸ್ಕøತಿಯ ಪ್ರತೀಕವಾಗಿದೆ. ಉಳಿಸಿ ಬೆಳೆಸುವದು ಗ್ರಾಮಸ್ಥರ ಕರ್ತವ್ಯವಾಗಿದೆ ಎಂದರು.ಮನೆ ಹಳ್ಳಿ ಮಠದ ಮಹಾಂತಶಿವಲಿಂಗ ಸ್ವಾಮಿಗಳು ಮಾತನಾಡುತ್ತಾ, ಪ್ರತಿ ವರ್ಷವು ದನಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆಧುನಿಕತೆ ದೃಷ್ಟಿಯಿಂದ ನಾನಾ ರೀತಿಯ ಯಂತ್ರಗಳನ್ನು ಉಪಯೋಗಿಸಲಾಗುತ್ತಿದೆ. ಈ ಜಾತ್ರೆ ಪ್ರಾರಂಭಿಸಿದ ಪೂಜ್ಯ ಶ್ರೀಗಳ ಭಾವಚಿತ್ರವನ್ನು ಜಾತ್ರಾ ಕರಪತ್ರಗಳಲ್ಲಿ ಪ್ರಕಟವಿರಲಿ ಎಂದರು. ಇತ್ತೀಚಿನ ದಿನಗಳಲ್ಲಿ ಜಾನುವಾರುಗಳ ಜಾತ್ರೆ ಮನರಂಜನೆ
(ಮೊದಲ ಪುಟದಿಂದ) ಜಾತ್ರೆಯಾಗುತ್ತಿದೆ, ಹಿಂದಿನ ಜಾತ್ರಾ ವೈಭವ ಇಂದಿಲ್ಲಾ ಎಂದರು.
ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮಿಗಳು ಮಾತನಾಡುತ್ತಾ, ಈ ಜಾತ್ರಾ ಮೈದಾನ, ಸರ್ವ ಧರ್ಮಗಳ ದೇವಾಲಯಗಳ ಮಧ್ಯೆದಲ್ಲಿದೆ ಜಾತ್ರೆ ಎಂದರೆ ಜನಪದ ಸೊಗಡಿರಬೇಕು. ವೈಜ್ಞಾನಿಕ ತಳಹದಿಯಲ್ಲಿ ಹೋಗುತ್ತಿದ್ದು, ಜನಪದ ಸಂಗೀತ, ಜಾನುವಾರುಗಳ ಮನೋರಂಜನೆ ಇದ್ದರೆ ಜಾತ್ರೆ ಎಂದೆನಿಸುತ್ತದೆ. ಜಾತ್ರೆಯ ಆಕರ್ಷಣೆ ಹೆಚ್ಚಿಸಲು ಹೃದಯ ವಿಶಾಲವಾಗಿರಬೇಕು ಎಂದರು. ಕಾಫಿ ಬೆಳೆಗಾರ ಎಸ್.ಕೆ. ವೀರಪ್ಪ, ನಿವೃತ್ತ ಸೈನಿಕ ಕೆ.ವಿ. ಮಂಜುನಾಥ್ ಜಾತ್ರಾ ಹಿನ್ನೆಲೆಯ ಬಗ್ಗೆ ತಿಳಿಸಿದರು.
ಸಮಾರಂಭದಲ್ಲಿ ಜಿ.ಪಂ. ಸದಸ್ಯೆ ಸರೋಜಮ್ಮ, ತಾ.ಪಂ. ಸದಸ್ಯ ಅನಂತ್ ಕುಮಾರ್, ಪ್ರಮುಖರಾದ ಡಿ.ಬಿ. ಧರ್ಮಪ್ಪ, ಹಂಡ್ಲಿ ಪಂಚಾಯಿತಿ ಅಧ್ಯಕ್ಷ ಹೆಚ್.ಎನ್. ಸಂದೀಪ್, ಉಪಾಧ್ಯಕ್ಷೆ ರೂಪಾ ದಿನೇಶ್, ಜೆ.ಎಂ. ಕಾಂತರಾಜ್, ಆರ್.ಎಸ್. ನಿಂಗಯ್ಯ, ಎಸ್.ಎಂ. ಉಮಾಶಂಕರ್, ಪಿಡಿಓ ಹಾಗೂ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು. ಜಾತ್ರಾ ಸಮಿತಿಯ ರಾಜಣ್ಣ ಸ್ವಾಗತಿಸಿ, ನಿರೂಪಣೆ ಮಾಡಿ ವಂದಿಸಿದರು.