ಮಡಿಕೇರಿ, ಜ. 28: ಮಡಿಕೇರಿ ನಗರಕ್ಕೆ ನೀರು ಒದಗಿಸುವ ಕುಂಡಾ ಮೇಸ್ತ್ರಿ ಯೋಜನೆಯ ಸ್ಥಳಕ್ಕೆ ಇಂದು ಪ್ರಬಾರ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಅವರು ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರೊಂದಿಗೆ ಭೇಟಿ ನೀಡಿದ್ದರು. ಈ ವೇಳೆ ಕುಂಡಾ ಮೇಸ್ತ್ರಿಯಲ್ಲಿ ಚೆಕ್ ಡ್ಯಾಮ್ ನಿರ್ಮಾಣವಾಗುವವರೆಗೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಸ್ಯಾಂಡ್ಬಂಡ್ ಅಳವಡಿಸಿ, ನೀರು ಸಂಗ್ರಹಿಸಲು ಅಂದಾಜು ರೂ. 31 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಬೇಕಾಗಿದ್ದು, ಇದಕ್ಕೆ ಹಣ ಒದಗಿಸಿಕೊಡುವಂತೆ ಕಾವೇರಮ್ಮ ಸೋಮಣ್ಣ ಹಾಗೂ ಆಯುಕ್ತ ರಮೇಶ್ ಮನವಿ ಮಾಡಿದರು.
ಕಾಮಗಾರಿಯ ಸಮಗ್ರ ಮಾಹಿತಿ ಪಡೆದ ಲಕ್ಷ್ಮಿಪ್ರಿಯ ಅವರು, ಸ್ಯಾಂಡ್ ಬಂಡ್ ಅಳವಡಿಕೆ ಸಂಬಂಧ ಕಾಮಗಾರಿಯ ಕ್ರಿಯಾ ಯೋಜನೆ ತಯಾರಿಸಿ ನೀಡುವಂತೆ ಹೇಳಿದರಲ್ಲದೆ, ಕ್ರಿಯಾ ಯೋಜನೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವದಾಗಿ ಆಶ್ವಾಸನೆಯಿತ್ತರು. ಈ ಸಂದರ್ಭ ನಗರಸಭಾ ಸದಸ್ಯರುಗಳಾದ ಮನ್ಸೂರ್, ಪ್ರಕಾಶ್ ಆಚಾರ್ಯ ಇದ್ದರು.