ಒಡೆಯನಪುರ, ಜ. 28: ‘ರಾಷ್ಟ್ರೀಯ ಸೇವಾ ಯೋಜನೆ ಎಂಬ ಸ್ವತಂತ್ರ ಪೂರ್ವದ ಪರಿಕಲ್ಪನೆಯ ಕನಸು ಸ್ವತಂತ್ರ ಭಾರತದಲ್ಲಿಂದು ನನಸಾಗುತ್ತಿದೆ’ ಎಂದು ಯಸಳೂರು ಸರಕಾರಿ ಪ.ಪೂ. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಕೆ.ವಿ. ಮೋಹನ್ ಅಭಿಪ್ರಾಯಪಟ್ಟರು. ಅವರು ಸಮಿಪದ ಊರುಗುತ್ತಿ, ಖ್ಯಾತಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕೊಡ್ಲಿಪೇಟೆ ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಪ್ರಥಮ ಬಾರಿಗೆ ಹಮ್ಮಿಕೊಂಡಿದ್ದ 2018-19ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಕೊಡ್ಲಿಪೇಟೆ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಆಂಗ್ಲ ಮಾಧ್ಯಮ ವಸತಿ ಶಾಲಾ ಪ್ರಾಂಶುಪಾಲ ಮಹೇಶ್ ಮಾತನಾಡಿ-ಶಿಬಿರಾರ್ಥಿಗಳು ಸೇವಾ ಕಾರ್ಯಕ್ರಮದ ಉದ್ದೇಶಗಳನ್ನು 7 ದಿನಗಳಿಗಷ್ಟೆ ಸೀಮಿತಗೊಳಿಸದೆ ಜೀವನದ ಉದ್ದಕ್ಕೂ ಅಳವಡಿಸಿಕೊಳ್ಳಬೇಕು ಎಂದರು. ಪತ್ರಕರ್ತ ದಿನೇಶ್ ಮಾಲಂಬಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಫಲಗಾರಿಕೆಯಲ್ಲಿ ಶಿಬಿರಾರ್ಥಿಗಳ ಪಾತ್ರ ಮುಖ್ಯವಾಗಿರು ತ್ತದೆ, ಶಿಬಿರದಲ್ಲಿ ಕೇವಲ ತಾನು ಸಹ ಪಾಲ್ಗೊಂಡಿದ್ದೇನೆ ಎಂಬ ಧೋರಣೆ ಯನ್ನು ಬಿಟ್ಟು ನಿಸ್ವಾರ್ಥ ಸೇವಾ ಮನೋಭಾವನೆ ಹೆಚ್ಚಾಗುತ್ತದೆ ಎಂಬ ಮನೋಭಾವನೆಯಿಂದ ಪಾಲ್ಗೊಂಡರೆ ಮುಂದೆ ಇದರಿಂದ ಶಿಬಿರಾರ್ಥಿಗಳು ಸಾಕಷ್ಟು ಅನುಭವ ಹೊಂದಿ ಸಮಾಜ ದಲ್ಲಿ ಉತ್ತಮ ಸೇವೆ ಸಲ್ಲಿಸುವಷ್ಟು ಪ್ರಬುದ್ದತೆ ಸಾಧಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜು ಪ್ರಾಂಶುಪಾಲ ಎಂ.ಆರ್. ನಿರಂಜನ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಘಟಕದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮತ್ತು ರಾಷ್ಟ್ಯತೆಯ ಕಳಕಳಿ ಹೆಚ್ಚಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಕೆ.ಎಸ್. ಪರಮೇಶ್, ಗ್ರಾ.ಪಂ. ಸದಸ್ಯ ಷಣ್ಮುಖಯ್ಯ, ಗ್ರಾಮದ ಪ್ರಮುಖ ಶಿವ ಗಣೇಶ್, ಜಯಪ್ಪ, ಶಿಬಿರಾಧಿಕಾರಿ ಕೆ.ಎಚ್.ಯೋಗೇಂದ್ರ ಮುಂತಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ವಿ.ಸಿ. ಸುರೇಶ್ ಒಡೆಯನಪುರ, ಭುವನೇಶ್, ಶಾಲಾ ಮುಖ್ಯ ಶಿಕ್ಷಕಿ ಎ.ಪಿ. ರಾಧ, ಉಪನ್ಯಾಸಕರಾದ ಅಭಿಲಾಷ್, ಪವಿತ್ರ, ಮುಂತಾದವರು ಇದ್ದರು.