ಗೋಣಿಕೊಪ್ಪ ವರದಿ, ಜ. 18 : ಪತ್ರಕರ್ತರು ಸೈದ್ಧಾಂತಿಕ ಭಿನ್ನಾಭಿಪ್ರಾಯ ಬಿಟ್ಟು ಒಂದೇ ಕೂಗಿನಲ್ಲಿ ಸಾಂವಿಧಾನಿಕ ಭದ್ರತೆಗೆ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಿದೆ ಎಂದು ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕ ಜಮೀರ್ ಅಹಮ್ಮದ್ ಅಭಿಪ್ರಾಯಪಟ್ಟರು.

ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಸಂಘದ ಕಾರ್ಯಚಟುವಟಿಕೆ ಕಾರ್ಯಕ್ರಮಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಪತ್ರಕರ್ತರು ಸಾಮಾಜಿಕ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದರು.

ಪತ್ರಕರ್ತರು ಅವರದೇ ಆದ ಭಿನ್ನಾಭಿಪ್ರಾಯದಿಂದ ಕಾನೂನು ಚೌಕಟ್ಟಿನಲ್ಲಿ ಅವರಿಗೆ ಬೇಕಾದ ಭದ್ರತೆಯನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಪರಸ್ಪರ ಭಿನ್ನಾಭಿಪ್ರಾಯದಿಂದ ಸರ್ಕಾರದಿಂದ ಸವಲತ್ತು ಪಡೆದುಕೊಳ್ಳಲು ಆಗುತ್ತಿಲ್ಲ. ಸಾಂವಿಧಾನಿಕವಾಗಿ ಪತ್ರಿಕಾರಂಗ ನಾಲ್ಕನೇ ಅಂಗ ಎಂಬ ಗೌರವ ಇದ್ದರೂ ಕೂಡ ಅದರಿಂದ ಕಾನೂನಾತ್ಮಕ ಭದ್ರತೆ ದೊರೆಯುತ್ತಿಲ್ಲ. ಸಾಮಾಜಿಕವಾಗಿ ರಕ್ಷಣೆ ಪಡೆದುಕೊಳ್ಳಲು ಪತ್ರಕರ್ತರ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಬಿಟ್ಟು ಸಾಂವಿಧಾನಿಕ ಭದ್ರತೆಗೆ ಹೋರಾಟ ನಡೆಸಬೇಕು ಎಂದು ಹೇಳಿದರು.

ದೇಶಪ್ರೇಮ, ನಾಡು-ನುಡಿ ಪ್ರೇಮದ ಮೂಲಕ ಆರಂಭವಾದ ಮಾಧ್ಯಮಗಳು ಇಂದು ಬಂಡವಾಳಶಾಯಿ ಹಾಗೂ ಪ್ರಭುತ್ವವಾದಿಗಳ ಹಿಡಿತದಲ್ಲಿವೆ. ಪ್ರಭುತ್ವವಾದಿಗಳನ್ನು ಎದುರಿಸಲು ಮಾಧ್ಯಮವನ್ನು ಪ್ರವೃತ್ತಿಯಾಗಿ ತೊಡಗಿಸಿಕೊಂಡಿರುವ ಪತ್ರಕರ್ತರಿಗೆ ಆರ್ಥಿಕ ಹಾಗೂ ಕಾನೂನು ಭದ್ರತೆಯ ಅವಶ್ಯಕತೆ ಇದೆ ಎಂದರು.

ಸರ್ಕಾರ ಮಾಧ್ಯಮದವರಿಗೆ ನೀಡುವ ಸವಲತ್ತು ಪಡೆದುಕೊಳ್ಳಲು ಉದ್ದೇಶಪೂರ್ವಕವಾಗಿ ನಾನಾ ನಿಯಮಗಳನ್ನು ರೂಪಿಸುತ್ತಿದೆ. ಜೀವವಿಮೆ ಪಡೆಯಲು ಕ್ರಿಮಿನಲ್ ಮೊಕದ್ದಮೆ ಇಲ್ಲದ ಪತ್ರಕರ್ತರಿಗೆ ಅವಕಾಶವಿದೆ. ಸಮಾಜದಲ್ಲಿ ನಡೆಯುತ್ತಿರುವ ಭೃಷ್ಟಾಚಾರದ ವಿರುದ್ಧ ಮಾಧ್ಯಮ ಪ್ರತಿನಿಧಿಗಳ ಮೇಲೆ ಮಾನನಷ್ಟ ಮೊಕದ್ದಮೆಗಳು ಸಾಮಾನ್ಯ. ಇದರಿಂದಾಗಿ ಇಂತಹ ಸವಲತ್ತು ದೊರಕದ ರೀತಿಯಲ್ಲಿ ನಿಯಮ ಹೊರಡಿಸುತ್ತಿದೆ ಎಂದು ಆರೋಪಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಸವಿತಾರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಿಕೊಂಡು ಸಂಘವನ್ನು ಮುನ್ನಡೆಸುವ ಮೂಲಕ ಸಂಘಟಿತರಾಗಲು ಮುಂದಾಗಬೇಕು ಎಂದು ಸಲಹೆ ನಿಡಿದರು.

ಈ ಸಂದರ್ಭ ನೂತನ ಪದಾಧಿಕಾರಿ ಹಾಗೂ ನಿರ್ದೇಶಕರುಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ರಾಷ್ಟ್ರೀಯ ಸಮಿತಿ ಸದಸ್ಯ ಎಸ್. ಎ. ಮುರುಳಿಧರ್, ರಾಜ್ಯ ಸಮಿತಿ ಸದಸ್ಯ ಅಜ್ಜಮಾಡ ರಮೇಶ್ ಕುಟ್ಟಪ್ಪ ಹಾಗೂ ಜಿಲ್ಲಾಧ್ಯಕ್ಷೆ ಸವಿತಾರೈ ಅವರುಗಳನ್ನು ಸನ್ಮಾನಿಸಲಾಯಿತು.

ತಾಲೂಕು ಸಂಘದಿಂದ ಉತ್ತಮ ವರದಿಗೆ ವಾರ್ಷಿಕ ಪ್ರಶಸ್ತಿ ನೀಡಲು ದತ್ತಿನಿಧಿ ಸ್ಥಾಪಿಸಲು ಹಣ ನೀಡುವದಾಗಿ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಎಸ್. ಎ. ಮುರುಳಿಧರ್, ರಾಜ್ಯ ಸಮಿತಿ ಸದಸ್ಯ ಅಜ್ಜಮಾಡ ರಮೇಶ್ ಕುಟ್ಟಪ್ಪ, ತಾಲೂಕು ಅಧ್ಯಕ್ಷ ಎಸ್. ಎಂ. ಚೆಂಗಪ್ಪ ಘೋಷಿಸಿದರು.

ಈ ಸಂದರ್ಭ ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷ ಬಿ. ಎನ್. ಪ್ರಕಾಶ್, ತಾಲೂಕು ಪತ್ರಕರ್ತರ ಸಂಘಧ ನಿಕಟಪೂರ್ವ ಅಧ್ಯಕ್ಷ ಕುಪ್ಪಂಡ ದತ್ತಾತ್ರಿ, ಕ್ಷೇಮಾಭಿವೃದ್ಧಿ ಸಮಿತಿ ಜಿಲ್ಲಾಧ್ಯಕ್ಷ ಎಸ್. ಮಹೇಶ್ ಹಾಗೂ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಹರೀಶ್‍ಕುಮಾರ್ ಉಪಸ್ಥಿತರಿದ್ದರು.

ಖಜಾಂಜಿ ರಾಜೇಶ್ ಪದ್ಮನಾಭ್ ಸ್ವಾಗತಿಸಿದರು. ಉಪಾಧ್ಯಕ್ಷ ಸುಬ್ರಮಣಿ ನಿರೂಪಿಸಿದರು. ಪ್ರ. ಕಾರ್ಯದರ್ಶಿ ರೆಜಿತ್‍ಕುಮಾರ್ ವಂದಿಸಿದರು.