ಗೋಣಿಕೊಪ್ಪ ವರದಿ, ಜ. 11: ಪಟ್ಟಣದ ಮುಖ್ಯರಸ್ತೆಯಲ್ಲಿ ಏಕಮುಖ ಸಂಚಾರ ಅನುಷ್ಠಾನಕ್ಕೆ ಪ್ರಾಯೋಗಿಕವಾಗಿ ಕ್ರಮಕೈಗೊಂಡಿರುವ ಪೊಲೀಸ್ ಇಲಾಖೆ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಸ್ಥಳೀಯ ಹಲವು ವರ್ತಕರು ಹಾಗೂ ಸಾರ್ವಜನಿಕರು ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ದಿವಾಕರ್ ಅವರಿಗೆ ಮನವಿ ಸಲ್ಲಿಸಿ ಏಕಮುಖ ಸಂಚಾರವನ್ನು ಮುಂದುವರಿಸುವಂತೆ ಒತ್ತಾಯಿಸಿದರು. ಪಾರ್ಕಿಂಗ್ ನಿರ್ವಹಣೆಗೆ ಕೆಲವೊಂದು ಪರ್ಯಾಯ ವ್ಯವಸ್ಥೆ ಮಾಡುವಂತೆ ಒತ್ತಾಯಿಸಲಾಯಿತು. ಈ ಬಗ್ಗೆ ಮೇಲಿನ ಅಧಿಕಾರಿಗಳಿಗೆ ತಿಳಿಸಿ ಕ್ರಮ ಕೈಗೊಳ್ಳುವದಾಗಿ ವೃತ್ತ ನಿರೀಕ್ಷಕ ದಿವಾಕರ್ ಭರವಸೆ ನೀಡಿದರು.ವರ್ತಕರು ಹಾಗೂ ಸಾರ್ವಜನಿಕರು ಸೇರಿಕೊಂಡು ಸುಮಾರು 40 ಕ್ಕೂ ಹೆಚ್ಚು ಜನರು ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು. ಮೈಸೂರು-ಕೇರಳ ಹೆದ್ದಾರಿ ಯಾಗಿರುವ ಗೋಣಿಕೊಪ್ಪ ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಏಕಮುಖ ಸಂಚಾರ ಅನುಷ್ಠಾನದಿಂದ ಸಮಸ್ಯೆ ಬಗೆಹರಿಯುವ ಬಗ್ಗೆ ಸ್ಥಳೀಯ ಚೇಂಬರ್ ಆಫ್ ಕಾಮರ್ಸ್ ಸಲಹೆಯಂತೆ ಜಾರಿಗೊಳಿಸಿರುವ ಸಂಚಾರ ವ್ಯವಸ್ಥೆಯಿಂದ ಹೆಚ್ಚು ಅನುಕೂಲವಾಗುತ್ತಿದೆ. ಇದೇ ಸಂಚಾರ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಮನವಿ ಮಾಡಿಕೊಳ್ಳಲಾಯಿತು.

ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಲು ಸಂಬಂಧಪಟ್ಟ ಸ್ಥಳಗಳಲ್ಲಿ ಸೂಚನಾ ಫಲಕ ಅಳವಡಿಸುವದು, ಬೈಪಾಸ್ ಇಕ್ಕೆಲಗಳನ್ನು ಸಮತಟ್ಟು ಮಾಡುವದು, ರೂರಲ್ ಕೋ-ಆಪರೇಟಿವ್ ಬ್ಯಾಂಕ್ ಹಿಂಭಾಗದ ಮಾರುಕಟ್ಟೆ ರಸ್ತೆಯಲ್ಲಿ ವಾರದ ಎಲ್ಲಾ ದಿನಗಳಲ್ಲೂ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡುವದು, ಬಸ್ ನಿಲ್ದಾಣದ ಎದುರಿನ

(ಮೊದಲ ಪುಟದಿಂದ) ಅರ್ವತೊಕ್ಲು ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸುವದು, ಅದೇ ಮಾರ್ಗದಲ್ಲಿ ಮತ್ತೊಂದು ಸಂಪರ್ಕ ರಸ್ತೆಯನ್ನು ಗುರುತಿಸುವದು, ಮುಖ್ಯ ರಸ್ತೆಯಲ್ಲಿ ದಿನವಿಡೀ ನಿಲ್ಲಿಸುವ ವಾಹನಗಳನ್ನು ತೆರವುಗೊಳಿಸಲು ಯೋಜನೆ ರೂಪಿಸಲು ಒತ್ತಾಯಿಸಲಾಯಿತು. ಈ ಸಂದರ್ಭ ವರ್ತಕರುಗಳಾದ ಸಿ.ಡಿ. ಮಾದಪ್ಪ, ಕೊಲ್ಲೀರ ಉಮೇಶ್, ಶೇಖರ್, ರಿಶೀಮ್, ನವೀನ್, ಸಾರ್ವಜನಿಕರುಗಳಾದ ಮತ್ರಂಡ ಪ್ರವೀಣ್, ಜಮ್ಮಡ ಅರಸು, ಚೆಪ್ಪುಡೀರ ಮಾಚಯ್ಯ, ಶಂಕರ್ ಹಾಗೂ ಇತರರು ಇದ್ದರು. - ಸುದ್ದಿಪುತ್ರ