ಶನಿವಾರಸಂತೆ, ಜ. 9: ಶನಿವಾರಸಂತೆ ಲಯನ್ಸ್ ಕ್ಲಬ್‍ನ ಮಾಸಿಕ ಸಭೆ ಇತ್ತೀಚೆಗೆ ಗುಡುಗಳಲೆ ಆರ್.ವಿ. ಕಲ್ಯಾಣ ಮಂಟಪದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ರವಿಕಾಂತ್ ಎಸ್.ಎಸ್. ಗೌಡ ಅಧ್ಯಕ್ಷತೆಯಲ್ಲಿ ನಡೆಯಿತು.

ಇತ್ತೀಚೆಗೆ ಲಯನ್ಸ್ ಕ್ಲಬ್ ವತಿಯಿಂದ ಶನಿವಾರಸಂತೆಯಲ್ಲಿ ನಡೆದ ಆರೋಗ್ಯ ಶಿಬಿರಕ್ಕೆ ಸಹಕರಿಸಿದ ಸಮಾಜ ಸೇವಾ ಕಾರ್ಯಕರ್ತರಾದ ಕಳಲೆ ಕೃಷ್ಣ ಹಾಗೂ ಪದವಿ ಕಾಲೇಜಿನ ರಾಜಶೇಖರ್ ಅವರುಗಳನ್ನು ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತ ಕಳಲೆ ಕೃಷ್ಣ ಮಾತನಾಡಿ, ಲಯನ್ಸ್ ಕ್ಲಬ್ ಮುಂದೆ ನಡೆಸುವ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಠದ ವತಿಯಿಂದ ಹೆಚ್ಚಿನ ಸಹಕಾರ ಕೊಡಿಸುವದಾಗಿ ಭರವಸೆ ನೀಡಿದರು.

ಲಯನ್ಸ್ ಕ್ಲಬ್ ಉಪಾಧ್ಯಕ್ಷ ನಾರಾಯಣ ಸ್ವಾಮಿ ಅವರು ಇದೇ ತಿಂಗಳು 14 ರಂದು ಯು.ಎಸ್.ಎ. (ಅಮೇರಿಕಾ) ದಲ್ಲಿರುವ ತಮ್ಮ ಕುಟುಂಬವನ್ನು ಸೇರಿಕೊಳ್ಳಲು ಹೋಗುತ್ತಿರುವ ಸಂದರ್ಭ ಇಲಿಯಾನ್‍ನಲ್ಲಿರುವ ಲಯನ್ಸ್ ಸಂಸ್ಥೆಯ ಮುಖ್ಯ ಕಚೇರಿಗೆ ಭೇಟಿಕೊಟ್ಟು ಶನಿವಾರಸಂತೆ ಲಯನ್ಸ್ ಕ್ಲಬ್‍ನ ಕಾರ್ಯಕ್ರಮಗಳನ್ನು ತಿಳಿಸಿ ಮುಂದಿನ ಪ್ರಗತಿಗೆ ಬೇಡಿಕೆಗಳನ್ನು ಸಲ್ಲಿಸಲಿದ್ದಾರೆ. ಇವರಿಗೆ ಸಭೆಯಲ್ಲಿ ಲಯನ್ಸ್ ವತಿಯಿಂದ ಶುಭ ಹಾರೈಸಲಾಯಿತು.

ಸನ್ಮಾನಿತ ರಾಜಶೇಖರ್ ಲಯನ್ಸ್ ಕ್ಲಬ್ ಉಪಾಧ್ಯಕ್ಷ ನಾರಾಯಣಸ್ವಾಮಿ ಹಾಗೂ ಲಯನ್ಸ್ ಕ್ಲಬ್ ಕಾರ್ಯದರ್ಶಿ ಬಿ.ಕೆ. ಚಿಣ್ಣಪ್ಪ ಅವರುಗಳು ಮಾತನಾಡಿ, ತಾ. 10 ರಂದು ಭಾರತೀ ವಿದ್ಯಾಸಂಸ್ಥೆ ವತಿಯಿಂದ ಹಂಡ್ಲಿ ಗ್ರಾಮದಲ್ಲಿ ನಡೆಯುತ್ತಿರುವ ಎನ್.ಎಸ್.ಎಸ್. ಶಿಬಿರದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್‍ನ ಸದಸ್ಯರುಗಳು ಭಾಗವಹಿಸುವಂತೆ ಕೋರಿದರು.

ಸಭೆಯಲ್ಲಿ ಲಯನ್ಸ್ ಕ್ಲಬ್‍ನ ಉಪಾಧ್ಯಕ್ಷರುಗಳಾದ ಎನ್.ಬಿ. ನಾಗಪ್ಪ, ಬಿ.ಸಿ. ಧರ್ಮಪ್ಪ ಹಾಗೂ ಸದಸ್ಯರು ಭಾಗವಹಿಸಿದ್ದರು. ಸದಸ್ಯ ಎ.ಎಂ. ಆನಂದ ಧ್ವಜವಂದನೆ ನೆರವೇರಿಸಿ, ಕಾರ್ಯದರ್ಶಿ ಬಿ.ಕೆ. ಚಿಣ್ಣಪ್ಪ ಸ್ವಾಗತಿಸಿ, ಖಜಾಂಚಿ ಎಂ.ಆರ್. ನಿರಂಜನ್ ವಂದಿಸಿದರು.