ಶನಿವಾರಸಂತೆ, ಜ. 9: ಸಮೀಪದ ಬೆಳ್ಳಾರಳ್ಳಿ ಗ್ರಾಮದ ತಿರುವ ರಸ್ತೆಯಲ್ಲಿ ಮುರುಗೇಶ್ ಎಂಬವರು ಬೈಕ್‍ನಲ್ಲಿ ತಮ್ಮ ಪತ್ನಿ ಹಾಗೂ ಪುತ್ರನೊಂದಿಗೆ ಶನಿವಾರಸಂತೆ ಕಡೆ ಬರುತ್ತಿದ್ದಾಗ ಎದುರುಗಡೆಯಿಂದ ಬಂದ ಕಾರೊಂದು ಡಿಕ್ಕಿ ಪಡಿಸಿತ್ತು. ಗಾಯಗೊಂಡ ಅವರಿಗೆ ಕಾರು ಚಾಲಕ ಸೋಮವಾರಪೇಟೆಯ ಪ್ರಸನ್ನ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹೇಮಾವತಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಆಸ್ಪತ್ರೆಯ ವೆಚ್ಚವನ್ನೆಲ್ಲಾ ತಾವೇ ಭರಿಸುವದಾಗಿ ಹೇಳಿದ ಚಾಲಕ ಪ್ರಸನ್ನ ಪೊಲೀಸ್ ಠಾಣೆಯಲ್ಲಿ ದೂರು ನೀಡುವದು ಬೇಡವೆಂದು ಮನವಿ ಮಾಡಿಕೊಂಡಿದ್ದರು.

ಆದರೆ, ಅಪಘಾತ ನಡೆದು 8 ದಿನಗಳಾದರೂ ಆಸ್ಪತ್ರೆಯ ಖರ್ಚು - ವೆಚ್ಚಗಳನ್ನು ನೀಡಿರುವದಿಲ್ಲ ಹಾಗೂ ದೂರು ನೀಡಿರುವದಿಲ್ಲ ಎಂದು ಆಕ್ಷೇಪಿಸಿ ಗಾಯಾಳು ಮುರುಗೇಶ್‍ನ ಚಿಕ್ಕಪ್ಪ ಕೆ.ಪಿ. ಸುಂದರ್ ತಡವಾಗಿ ಇಂದು ದೂರು ನೀಡಿ, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ.