ಶನಿವಾರಸಂತೆ, ಜ. 4: ಸಮೀಪದ ಮುಳ್ಳೂರು ಗ್ರಾಮದ ಕೂಲಿ ಕಾರ್ಮಿಕ ಎಂ.ಆರ್. ಪ್ರಸಾದ್ (29) ಎಂಬಾತ ಭತ್ತದ ಮಿಷನ್‍ಗೆ ಹುಲ್ಲಿನ ಹೊರೆ ಹಾಕುವ ಸಂದರ್ಭ ಎಡಗಾಲನ್ನು ಕಳೆದುಕೊಂಡ ಘಟನೆ ನಡೆದಿದೆ.ರಾಘವೇಂದ್ರಾಚಾರ್ ಎಂಬವರ ಪುತ್ರ ಪ್ರಸಾದ್ ಕೂಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದು, ಅದೇ ಗ್ರಾಮದ ಕಿಟ್ಟಾಚಾರ್ ಅವರ ಗದ್ದೆಯ ಕೊಯ್ಲು ಕೆಲಸಕ್ಕೆ ಇತರ ಕಾರ್ಮಿಕರೊಂದಿಗೆ ತೆರಳಿದ್ದರು. ಶಶಿ ಎಂಬವರ ಕಣದಲ್ಲಿ ಮಾಲೀಕ ಚಂದ್ರಪ್ಪ ಮಾಸ್ಟರ್ ಅವರ ಭತ್ತದ ಮಿಷನ್‍ಗೆ ಭತ್ತದ ಬೆಳೆಯನ್ನು ಹೊರೆ ಕಟ್ಟಿ ಹಾಕುವ ಕೆಲಸ ನಡೆದಿತ್ತು. ಕರಿ ಭಾಸ್ಕರಾಚಾರ್ ಮಿಷನ್ ಚಾಲನೆ ಮಾಡುತ್ತಿದ್ದರು. ಪ್ರಸಾದ್ ಮಿಷನ್ ಮೇಲೆ ನಿಂತು ಭತ್ತ ಮತ್ತು ಹುಲ್ಲನ್ನು ಬೇರ್ಪಡಿಸುವ ಕೆಲಸ ಮಾಡುತ್ತಿದ್ದ ಸಂದರ್ಭ ಘಟನೆ ನಡೆದಿದೆ. ಹುಲ್ಲನ್ನು ಮಿಷನ್‍ನ ಒಳಕ್ಕೆ ಎಡ ಕಾಲಿನಿಂದ ತಳ್ಳುವಾಗ ಕಾಲು ಸಿಕ್ಕಿಕೊಂಡು ತುಂಡಾಗಿದೆ.

ಹುಲ್ಲಿನ ಹೊರೆ ಹಾಕುತ್ತಿದ್ದ ಇತರ ಕಾರ್ಮಿಕರು ಪ್ರಸಾದ್ ಅವರನ್ನು ಹೊರಗೆಳೆದಿದ್ದಾರೆ.