ಮಡಿಕೇರಿ, ಜ. 5: ಅಮೇರಿಕ ಕನ್ನಡ ಕೂಟಗಳ ಆಗರ (ಅಕ್ಕ) ಸಂಸ್ಥೆ ವತಿಯಿಂದ ಮಕ್ಕಂದೂರಿನಲ್ಲಿ ನಿರ್ಮಿಸಲಾಗುವ ಶಾಲಾ ಕೊಠಡಿ ನಿರ್ಮಾಣದ ಸ್ಥಳವನ್ನು ಅಕ್ಕ ಸಂಸ್ಥೆಯ ಗೌರವ ಅಧ್ಯಕ್ಷ ಅಮರನಾಥ ಗೌಡ, ಅಧ್ಯಕ್ಷ ಶಿವಮೂರ್ತಿ ಕಿಲಾರ, ಮಾಜಿ ಅಧ್ಯಕ್ಷ ವಿಶ್ವಾಮಿತ್ರ ಇತರರು ಪರಿಶೀಲಿಸಿದರು.
ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಶಿವಮೂರ್ತಿ ಕಿಲಾರ ಅವರು ಶಾಲಾ ಕಟ್ಟಡವು ಮೂರು ಕೊಠಡಿಗಳನ್ನು ಹೊಂದಿದ್ದು, ಮೇಲ್ಭಾಗದಲ್ಲಿ ಸಭಾಂಗಣ ಹಾಗೆಯೇ ಶೌಚಾಲಯ ಸೇರಿದಂತೆ 50 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.
ಸ್ಥಾಪಕಾಧ್ಯಕ್ಷ ಅಮರಾಥ ಗೌಡ ಮಾತನಾಡಿ ಅಮೇರಿಕದಲ್ಲಿ ಕನ್ನಡಿಗರನ್ನು ಒಟ್ಟುಗೂಡಿಸಿ ಕನ್ನಡ ನಾಡು ನುಡಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಅಮೇರಿಕ ಕನ್ನಡ ಕೂಟ ಕೆಲಸ ಮಾಡುತ್ತಿದೆ ಎಂದರು.
ಅಕ್ಕ ಸಂಸ್ಥೆಯ ಮಾಜಿ ಅಧ್ಯಕ್ಷ ವಿಶ್ವಾಮಿತ್ರ ಮಾತನಾಡಿ ತವರೂರಿಗೆ ಏನಾದರೂ ಒಳ್ಳೆದನ್ನು ನೀಡಬೇಕು ಎಂಬ ಉದ್ದೇಶದಿಂದ ಶಾಲಾ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.
ಗುಲ್ಬರ್ಗಾ ವಿಭಾಗದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಡಾ. ಕಾ. ರಾಮೇಶ್ವರಪ್ಪ ಅವರು ಮಾತನಾಡಿ ಕನ್ನಡಿಗರು, ನಾಡು ನುಡಿ ಬಗ್ಗೆ ಎಲ್ಲೆಡೆ ಪಸರಿಸುವ ನಿಟ್ಟಿನಲ್ಲಿ ಅಕ್ಕ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಗ್ರಾ.ಪಂ .ಸದಸ್ಯರಾದ ಸತೀಶ್, ರಮೇಶ್ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಭವಾನಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಹರೀಶ್, ಮಧು, ಪಿಡಿಓ ಇತರರು ಇದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲೆಯ ಶಿಕ್ಷಕ ರಂಜಿತ್ ನಿರೂಪಿಸಿ, ವಂದಿಸಿದರು.