ಶನಿವಾರಸಂತೆ, ಜ. 1: ಪ್ರವಾದಿ ಮಹಮ್ಮದ್ ಪೈಗಂಬರ್ ಅವರನ್ನು ಸುದ್ದಿ ವಾಹಿನಿಯೊಂದರ ನಿರೂಪಕ ಅಜಿತ್ ಹನುಮಕ್ಕನವರ್ ನಿಂದಿಸಿದ್ದಾರೆ ಎಂದು ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಎಸ್‍ಕೆಎಸ್‍ಎಸ್‍ಎಫ್ ಘಟಕದ ಪದಾಧಿಕಾರಿಗಳು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರವಾದಿ ಮಹಮ್ಮದ್‍ರ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ವಿನಾ ಕಾರಣ ಯಾವದೇ ಪ್ರಚೋದನೆ ಇಲ್ಲದೆ ಚರ್ಚೆಯ ನಡುವೆ ಪ್ರವಾದಿ ಅವರನ್ನು ಅನಗತ್ಯವಾಗಿ ಮತ್ತು ದುರುದ್ದೇಶಪೂರಿತವಾಗಿ ಎಳೆದು ತಂದು ಕೀಳುಮಟ್ಟದಲ್ಲಿ ಮಾತನಾಡಿದ್ದಾರೆ. ಇಡಿ ಸಮುದಾಯವನ್ನು ಬಾಂಬ್ ಹಾಕುವವರು ಎಂಬಂತೆ ಬಣ್ಣಿಸಿದ್ದಾರೆ. ಇಂತಹ ಕಾರ್ಯಕ್ರಮ ಮತ್ತು ಹೇಳಿಕೆಗಳಿಂದ ಸಮಾಜದ ಶಾಂತಿ ಕದಡುವ ಮತ್ತು ಕೋಮುಗಲಭೆಗಳು ನಡೆಯುವ ಅಪಾಯ ಹೆಚ್ಚಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಿರೂಪಕ ವಿರುದ್ಧ ದೂರು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಸ್‍ಕೆಎಸ್‍ಎಸ್‍ಎಫ್ ಘಟಕದ ಅಧ್ಯಕ್ಷ ಜಿ.ಎಂ. ಸಿದ್ದೀಕ್ ಬ್ಯಾಡಗೊಟ್ಟ ಸುಲೈಮಾನ್, ಕೆ.ಬಿ. ಉಸ್ಮಾನ್, ರಜಾಕ್ ಫೈಝಿ, ತಾಜುದ್ದೀನ್,. ಹಸೈನಾರ್ ಫೈಝಿ ಹಾಗೂ 30ಕ್ಕೂ ಅಧಿಕ ಕಾರ್ಯಕರ್ತರು ಪಿಎಸ್‍ಐ ಎಚ್.ಎಂ. ಮರಿಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.