ಕೂಡಿಗೆ, ಡಿ. 19 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದೇ ಡಿಸೆಂಬರ್ 22, 23 ರಂದು ನಾಪೋಕ್ಲು ಪಟ್ಟಣದಲ್ಲಿ ಆಯೋಜಿಸಿರುವ 13ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾದ ಕಣಿವೆಯ ಭಾರಧ್ವಾಜ್ ಕೆ. ಆನಂದತೀರ್ಥ ಅವರನ್ನು ಅಧಿಕೃತವಾಗಿ ಸಮ್ಮೇಳನಕ್ಕೆ ಆಹ್ವಾನಿಸಲಾಯಿತು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಬಿ.ಎಸ್. ಲೋಕೇಶ್ಸಾಗರ್, ಕೋಶಾಧ್ಯಕ್ಷ ಎಸ್.ಎ. ಮುರುಳೀಧರ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ವಿಜೇತ್, ನಿಕಟ ಪೂರ್ವ ಅಧ್ಯಕ್ಷ ಜವರ ಸೇರಿದಂತೆ ನಿರ್ದೇಶಕರು, ಪದಾಧಿಕಾರಿಗಳು ಸಮ್ಮೇಳನಾಧ್ಯಕ್ಷರನ್ನು ಗೌರವಿಸಿ ಸಮ್ಮೇಳನಕ್ಕೆ ಆಹ್ವಾನಿಸಿದರು.
ಈ ಸಂದರ್ಭ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಫಿಲಿಪ್ವಾಸ್, ಕೆ.ಕೆ.ನಾಗರಾಜಶೆಟ್ಟಿ, ತಾಲೂಕು ಗೌರವ ಕಾರ್ಯದರ್ಶಿ ಆದಂ, ಕನ್ನಡ ಸಾಹಿತ್ಯ ಪರಿಷತ್ತಿನ ಹಂಡ್ರಂಗಿ ನಾಗರಾಜ್, ಊ.ರಾ.ನಾಗೇಶ್, ನಾ.ಲ.ವಿಜಯ, ಸದಾಶಿವ ಎಸ್.ಪಲ್ಲೇದ್, ದಿನೇಶಾಚಾರಿ, ಖಾನ್, ವೆಂಕಟನಾಯಕ್, ಲೋಕೇಶ್, ಕುಶಾಲನಗರದ ಉದ್ಯಮಿ ಕೆ.ಎಸ್.ಮಹೇಶ್ ಸೇರಿದಂತೆ ಮಹಿಳಾ ಪದಾಧಿಕಾರಿಗಳು ಇದ್ದರು.
ಸುದ್ದಿಗಾರರೊಂದಿಗೆ ಸಮ್ಮೇಳನಾಧ್ಯಕ್ಷರಾದ ಸಾಹಿತಿ ಭಾರದ್ವಾಜ್ ಕೆ.ಆನಂದತೀರ್ಥ ಅವರು ಮಾತನಾಡಿ, ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವದು ತುಂಬಾ ಸಂತೋಷದಾಯಕವಾಗಿದೆ. ಜಿಲ್ಲೆಯಲ್ಲಿ ಕನ್ನಡ ಭಾಷೆಯ ಬೆಳವಣಿಗೆ ಇನ್ನು ಹೆಚ್ಚು ಹೆಚ್ಚು ಆಗಬೇಕಿದೆ. ಗ್ರಾಮಕ್ಕೊಂದು ಕನ್ನಡ ಮಾಧ್ಯಮ ಶಾಲೆಯನ್ನು ತೆರೆಯುವ ಮೂಲಕ ಕನ್ನಡ ಶಾಲೆಗಳನ್ನು ಹಾಗೂ ಕನ್ನಡ ಭಾಷೆಯನ್ನು ಉಳಿಸುವ ಕೆಲಸ ಆಗುತ್ತದೆ. ಅಲ್ಲದೆ, ಕನ್ನಡ ಶಾಲೆಗಳ ಮುಚ್ಚುವಿಕೆ ತಪ್ಪುತ್ತದೆ. ಇಲ್ಲದಿದ್ದಲ್ಲಿ ಕನ್ನಡ ಶಾಲೆಯ ಮುಚ್ಚುವಿಕೆ ಹೆಚ್ಚಾಗುತ್ತದೆ. ಮಕ್ಕಳಲ್ಲಿ ಈಗಿನಿಂದಲೇ ಕನ್ನಡ ಸಾಹಿತ್ಯಾಸಕ್ತಿ ಬೆಳೆಸುವಂತಹ ಕೆಲಸವನ್ನು ಪೋಷಕರು ಮಾಡಬೇಕು ಎಂದರು.