ವೀರಾಜಪೇಟೆ, ಡಿ. 19: ವೀರಾಜಪೇಟೆ ಸುಂಕದ ಕಟ್ಟೆಯ ನಿವಾಸಿ ಪಿ.ಎಸ್.ಮನೋಜ್ ಕುಮಾರ್ ಎಂಬಾತನಿಗೆ ಕತ್ತಿಯಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇರೆ ಎಂ.ಯು.ಗಣೇಶ್ ಹಾಗೂ ಬೇಕರಿ ಉದ್ಯಮಿ ಎಂ.ಯು.ಕರ್ಣ ಎಂಬಿಬ್ಬರಿಗೆ ಇಲ್ಲಿನ ಎರಡನೇ ಅಧಿಕ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು 3ವರ್ಷಗಳ ಸಜೆ, ತಲಾ ರೂ.30,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಕಳೆದ ತಾ. 30-7-18ರಂದು ರಾತ್ರಿ 9-15ರ ಸಮಯದಲ್ಲಿ ಸುಂಕದಕಟ್ಟೆಯ ಮನೆಯಲ್ಲಿದ್ದ ಮನೋಜ್ ಕುಮಾರ್ ಎಂಬಾತನನ್ನು ಹಿಂದಿನ ಪ್ರಕರಣದ ರಾಜಿ ಸಂಧಾನ ಮಾಡುವ ಎಂದು ಕರೆದು ಈಶ್ವರ ಬೆಟ್ಟದ ರಸ್ತೆಯಲ್ಲಿ ಆರೋಪಿಗಳಾದ ಎಂ.ಯು.ಗಣೇಶ್, ಎಂ.ಯು. ಕರ್ಣ ಹಾಗೂ ಎಂ.ಯು. ಶಶಿ ಎಂಬ ಮೂವರು ಸೇರಿ ಹಿಂದಿನ ವೈಷಮ್ಯವನ್ನು ಸಾಧಿಸುವ ಸಲುವಾಗಿ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ಗಂಭೀರ ಸ್ಥಿತಿಯಲ್ಲಿದ್ದ ಮನೋಜ್‍ಕುಮಾರ್‍ನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.

ನಗರ ಪೊಲೀಸರು ಮೂವರ ವಿರುದ್ಧ ಐ.ಪಿ.ಸಿ. 307ರ ಪ್ರಕಾರ ಪ್ರಕರಣ ದಾಖಲಿಸಿ ಬಂಧಿಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣ ದಾಖಲಿಸಿದ ನಂತರ ಎಂ.ಯು. ಶಶಿ ಮೃತಪಟ್ಟಿರುವದಾಗಿ ಪೊಲೀಸರು ನ್ಯಾಯಾಲಯಕ್ಕೆ ಮರಣದ ದೃಢೀಕರಣ ಪತ್ರ ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ.ಜಿ.ರಮಾ ಅವರು ಆರೋಪಿಗಳಿಂದ ದಂಡದ ರೂಪದಲ್ಲಿ ಬರುವ ನಗದು ಹಣದಲ್ಲಿ ಗಾಯಾಳು ಮನೋಜ್‍ಗೆ ರೂ 40,000 ಪಾವತಿಸುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಸರಕಾರದ ಪರ ಅಭಿಯೋಜಕರಾದ ಡಿ.ನಾರಾಯಣ ವಾದಿಸಿದರು.