ಮಡಿಕೇರಿ, ನ. 24: ಮರಗೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೊಡಗು ಜಿಲ್ಲಾಮಟ್ಟದ ಹುತ್ತರಿ ಕಪ್ ಫುಟ್ಬಾಲ್ ಪಂದ್ಯಾವಳಿಯ ಎರಡನೇ ದಿನದಾಟದಲ್ಲಿ ನಾಲ್ಕು ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ. ಸಿ ಗುಂಪಿನಲ್ಲಿ ಆತಿಥೇಯ ವೈಷ್ಣವಿ ತಂಡ ಮೊದಲ ಸುತ್ತಿನಲ್ಲಿ ಓಂ ಶಕ್ತಿ ಭೂತನಕಾಡು ತಂಡದ ವಿರುದ್ಧ 4-0 ಗೋಲುಗಳ ಅಂತರದಿಂದ ಭರ್ಜರಿ ಜಯಗಳಿಸಿತು. ಬಳಿಕ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಯೂನಿವರ್ಸಲ್ ರಂಗಸಮುದ್ರ ತಂಡದ ವಿರುದ್ಧ 2-1 ಗೋಲುಗಳ ಅಂತರದಿಂದ ಜಯಭೇರಿ ಭಾರಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಭಾರತ್ ಮಾತಾ ಗರಗಂದೂರು ತಂಡದ ವಿರುದ್ಧ ಮಿಲನ್ಸ್ ಅಮ್ಮತ್ತಿ 4-1 ಗೋಲುಗಳಿಂದ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಗ್ರೂಪ್ ಡಿಯಲ್ಲಿ ಐಎನ್ಎಸ್ ಗುಡ್ಡೆಹೊಸೂರು ತಂಡ ಕುಂಜಿಲ ಬಾಯ್ಸ್ ತಂಡದ ವಿರುದ್ಧ 5-1 ಗೋಲುಗಳ ಸುಲಭ ಜಯ ದಾಖಲಿಸಿತು. ಐಎನ್ಎಸ್ ತಂಡದ ದಿವಾಕರ್ ಹ್ಯಾಟ್ರಿಕ್ ಗೋಲಿನ ಸಾಧನೆ ಮಾಡಿ ಪ್ರಮುಖ ಪಾತ್ರ ವಹಿಸಿದರು. ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಪಾಲಿಬೆಟ್ಟದ ನೆಹರು ಎಫ್ಸಿ ಎ ಹಾಗೂ ಕೆವೈಸಿ ಕೊಣ್ಣಂಗೇರಿ ತಂಡಗಳ ಮಧ್ಯೆ ರೋಚಕ ಪೈಪೋಟಿ ನಡೆಯಿತು. ಕೊನೆಗೆ ಪೆನಾಲ್ಟಿ ಶೂಟೌಟ್ನಲ್ಲಿ ನೆಹರೂ ಎಫ್ಸಿ ಎ ತಂಡ ಕೊಣ್ಣಂಗೇರಿ ತಂಡವನ್ನು 4-3 ಗೋಲುಗಳಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಈ ಗುಂಪಿನ ಕೊನೆಯ ಪಂದ್ಯದಲ್ಲಿ ನೆಹರು ಎಫ್ಸಿ ಎ ತಂಡ ಹರ್ಷ ಎಫ್ಸಿ ಮೂರ್ನಾಡು ತಂಡಕ್ಕೆ 4-0 ಗೋಲುಗಳಿಂದ ಮರ್ಮಾಘಾತ ನೀಡಿ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿತು.
ಇಂದು ಫೈನಲ್
ಹುತ್ತರಿ ಕಪ್ ಫುಟ್ಬಾಲ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ತಾ. 25ರಂದು (ಇಂದು) ನಡೆಯಲಿದೆ. ಎ ಗುಂಪಿನ ಕ್ವಾರ್ಟರ್ ಫೈನಲ್ನಲ್ಲಿ ಕೆಕೆಎಫ್ಸಿ ಚೆಟ್ಟಳ್ಳಿ ಮತ್ತು ನೆಹರು ಎಫ್ಸಿ ಎ ತಂಡ ಮುಖಾಮುಖಿಯಾಗಲಿದೆ. ಬಿ ಗುಂಪಿನಲ್ಲಿ ನೇತಾಜಿ ಎಫ್ ಕೊಡಗರ ಹಳ್ಳಿ ಹಾಗೂ ಹಾಲುಗುಂದ ಭಗವತಿ ಎಫ್ಸಿ ತಂಡ ಕ್ವಾರ್ಟರ್ ಫೈನಲ್ ಹಣಾಹಣಿ ನಡೆಸಲಿದೆ. ಸಿ ಗುಂಪಿನಲ್ಲಿ ಆತಿಥೇಯ ವೈಷ್ಣವಿ ಎಫ್ಸಿ, ಮಿಲನ್ಸ್ ಅಮ್ಮತ್ತಿ ಎ ತಂಡಕ್ಕೆ ಸವಾಲೊಡ್ಡಲಿವೆÉ. ಡಿ ಗುಂಪಿನಲ್ಲಿ ಐಎನ್ಎಸ್ ಗುಡ್ಡೆ ಹೊಸೂರು ಮತ್ತು ನೆಹರು ಎಫ್ಸಿ ಎ ತಂಡ ಸೆಮಿಫೈನಲ್ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆÉ.
ಮಧ್ಯಾಹ್ನ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ. ಸಂಜೆ ನಾಲ್ಕು ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ವೈಷ್ಣವಿ ಫುಟ್ಬಾಲ್ ಕ್ಲಬ್ನ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಮರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ರುಪಣೆ ಮೋಹನ್ ಕುಮಾರ್, ಹೊಸ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತ, ಮರಗೋಡು ಸರ್ಕಾರೀ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಕೆದಂಬಾಡಿ ಚಂದ್ರಕಲಾ, ನಿವೃತ್ತ ಯೋಧ ಐಮಂಡ ನಾಣಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.