ಮಡಿಕೇರಿ, ನ. 24: ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ನಗರಸಭೆಯ ವತಿಯಿಂದ ರಸ್ತೆ ವಿಸ್ತರಣೆಗಾಗಿ ಮಾಕಿರ್ಂಗ್ ಕಾರ್ಯ ಬಿರುಸಿನಿಂದ ಸಾಗಿದೆ.

ರೇಸ್‍ಕೋರ್ಸ್ ರಸ್ತೆಯ ಎರಡು ಬದಿಯಲ್ಲಿಯೂ 0.75 ಮೀಟರ್‍ನಷ್ಟು ವಿಸ್ತರಣೆ ಮಾಡುವ ಉದ್ದೇಶದಿಂದ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ನೇತೃತ್ವದಲ್ಲಿ ಮಾರ್ಕಿಂಗ್ ಕಾರ್ಯ ನಿನ್ನೆ ಆರಂಭವಾಗಿದೆ. ಮಾರ್ಕಿಂಗ್ ನಂತರ ನಗರದ ರಾಜಾಸೀಟ್‍ನಿಂದ ನೂತನ ಖಾಸಗಿ ಬಸ್ ನಿಲ್ದಾಣದವರೆಗೆ ಮರು ಡಾಂಬರೀಕರಣ ಮಾಡಲು ನಗರಸಭೆ ಸಿದ್ಧತೆ ನಡೆಸುತ್ತಿದೆ.

ನೂತನ ಖಾಸಗಿ ಬಸ್ ನಿಲ್ದಾಣ ಉದ್ಘಾಟನೆಯಾಗಿದ್ದರೂ, ನಿಲ್ದಾಣದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂದು ಆರೋಪಿಸಿ ಖಾಸಗಿ ಬಸ್ ಮಾಲೀಕರು ಅಲ್ಲಿಗೆ ತೆರಳಲು ಮುಂದಾಗಿರಲಿಲ್ಲ. ಈ ಸಮಸ್ಯೆಯಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ.

ಇತ್ತೀಚೆಗೆ ನಗರಸಭೆ ವತಿಯಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ನಗರದ ರೇಸ್‍ಕೋರ್ಸ್ ರಸ್ತೆಯ ಬಳಿ ನೂತನವಾಗಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಆದರೆ, 1 ಕಿ.ಮೀ. ದೂರದಲ್ಲಿರುವ ನಿಲ್ದಾಣದಿಂದ ನಗರಕ್ಕೆ ಆಟೋಗಳನ್ನು ಏರಿ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ನೂತನ ಬಸ್ ನಿಲ್ದಾಣಕ್ಕೆ ಬರುವ - ಹೋಗುವ ರಸ್ತೆಗಳ ಬಗ್ಗೆಯೂ ಈವರೆಗೆ ಸೂಚಿಸಿಲ್ಲ. ಆದ್ದರಿಂದ ಖಾಸಗಿ ಬಸ್ ಮಾಲೀಕರು ನಗರದ ಹಳೇ ಬಸ್ ನಿಲ್ದಾಣದಲ್ಲಿ ಬಸ್‍ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾರೆ. ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಖಾಸಗಿ ಬಸ್ ನಿಲ್ದಾಣದ ಹಿಂಭಾಗ ಮಣ್ಣು ಕುಸಿದಿದ್ದರಿಂದ ಹಾಗೂ ಅಪಾಯದ ಅರಿವಿಲ್ಲದೆ ಕೆಲವರು ಅಲ್ಲೆ ಬಂದು ನಿಲ್ಲುತ್ತಿದ್ದ ಕಾರಣ ನಗರಸಭೆ ಎಚ್ಚೆತ್ತುಕೊಂಡು ಹಳೆ ಖಾಸಗಿ ಬಸ್ ನಿಲ್ದಾಣವನ್ನು ನೆಲಸಮ ಮಾಡಿತ್ತು.

ಪೌರಾಯುಕ್ತ ರಮೇಶ್ ಮಾತನಾಡಿ ನಗರೋತ್ಥಾನದ ಮೂರನೇ ಹಂತದ ಕಾಮಗಾರಿಗೆ ರೂ. 85 ಲಕ್ಷದ 62 ಸಾವಿರ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ. ಹಾಗಾಗಿ ರಾಜಾಸೀಟ್‍ನಿಂದ ಖಾಸಗಿ ಬಸ್ ನಿಲ್ದಾಣದವರೆಗೆ ಸರ್ವೆ ಕಾರ್ಯ ಮಾಡಲಾಗುತ್ತಿದೆ ಎಂದರು.

ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಮೂಡಾ ಇಂಜಿನಿಯರ್ ನೇತೃತ್ವದಲ್ಲಿ ಸರ್ವೆ ಮಾಡಲಾಗುತ್ತಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ಇದೆ. ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕೆಂದು ಈಗಾಗಲೇ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.