ಮಡಿಕೇರಿ, ನ. 24: ನಗರದ ಕೋಟೆ ಆವರಣದಲ್ಲಿಂದು ಕೋಲಾಟದ ಕಲರವ ಕೇಳಿ ಬಂತು. ಸಾಂಪ್ರದಾಯಿಕವಾಗಿ ನಡೆದು ಬಂದಿರುವ ಹುತ್ತರಿ ಕೋಲಾಟವು ಈ ಬಾರಿಯೂ ಆಕರ್ಷಣೀಯವಾಗಿ ಮೂಡಿ ಬಂತು.

ಪಾಂಡಿರ ಕುಟುಂಬ, ಮಡಿಕೇರಿ ಕೊಡವ ಸಮಾಜ, ಗೌಡ ಯುವ ವೇದಿಕೆ, ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಆಶ್ರಯದಲ್ಲಿ ಏರ್ಪಾಡಾಗಿದ್ದ ಹುತ್ತರಿ ಕೋಲಾಟಕ್ಕೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ದೀಪ ಬೆಳಗಿಸಿ ಚಾಲನೆ ನೀಡಿದರು. ಅತಿಥಿಗಳಾಗಿ ಜಿಲ್ಲಾಧಿಕಾರಿ ಶ್ರೀವಿದ್ಯಾ, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್, ಮುಳಿಯ ಜ್ಯುವೆಲ್ಸ್ ಮಾಲೀಕ ಕೇಶವ ಪ್ರಸಾದ್ ಮುಳಿಯ, ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್, ಕಾರ್ಯನಿರ್ವಹಣಾದಿ üಕಾರಿ ಸಂಪತ್ ಕುಮಾರ್ ಮತ್ತಿತರರು ಇದ್ದರು. ಪಾಂಡಿರ ಕುಟುಂಬದಿಂದ ಕೋಲಾಟ್, ಬೊಳಕಾಟ್, ಉಮ್ಮತ್ತಾಟ್, ಕೊಡವ ಸಮಾಜದಿಂದ ಕೋಲಾಟ್, ಬೊಳಕಾಟ್, ಕೊಡವ ಪೊಮ್ಮಕ್ಕಡ ಕೂಟದಿಂದ ಉಮ್ಮತ್ತಾಟ್, ಗೌಡ ಯುವ ವೇದಿಕೆಯಿಂದ ಬೊಳಕಾಟ್ ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ಆಂಜನೇಯ ಗುಡಿಯಲ್ಲಿ ನಡೆದ ಕಳವು ಪ್ರಕರಣ ಭೇದಿಸಿದ ಪೊಲೀಸ್ ಸಿಬ್ಬಂದಿ ರಾಯ್, ಚೆಲುವರಾಜ್ ಇವರುಗಳನ್ನು ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.