ಸುಂಟಿಕೊಪ್ಪ, ನ. 24: ಆಟೋ ಚಾಲಕನೊಬ್ಬನಿಗೆ ಬಿಯರ್ ಬಾಟಲಿಯಿಂದ ಥಳಿಸಿ ಗಾಯಗೊಳಿಸಿದ ಘಟನೆ ನಡೆದಿದೆ. ತಾ.21 ರಂದು ರಾತ್ರಿ 10.30 ಗಂಟೆಗೆ ಶ್ರೀದೇವಿ ನಾರ್ಗಾಣೆ ಗ್ರಾಮದ ನಿವಾಸಿ ಆಟೋ ಚಾಲಕ ಎಂ.ಎ. ಶರೀಫ್ ಎಂಬವರು ಪೂಜಾ ಬಾರ್‍ನಲ್ಲಿದ್ದ ಸಂದೀಪ್ ಹಾಗೂ ದಿನೇಶ್‍ರನ್ನು ಮನೆಗೆ ಕರೆದೊಯ್ಯಲು ಬಾರ್ ಬಳಿ ತೆರಳಿದಾಗ ಬಾರ್‍ನಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದ ವಿಘ್ನೇಶ ಎಂಬಾತ ಏಕಾಏಕಿಯಾಗಿ ನಿನೇಕೆ ಬಾರ್‍ಗೆ ಬಂದೆ ಎಂದು ಬಿಯರ್ ಬಾಟಲಿಯಿಂದ ತಲೆಗೆ ಥಳಿಸಿ ಗಾಯಗೊಳಿಸಿದಲ್ಲದೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಎಂದು ಸುಂಟಿಕೊಪ್ಪ ಠಾಣೆಯಲ್ಲಿ ದೂರು ದಾಖಲಾಗಿದೆ. ಠಾಣಾಧಿಕಾರಿ ಜಯರಾಮ್ ಅವರು ಆರೋಪಿ ವಿಘ್ನೇಶ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಿಂದ 200 ಮೀಟರ್ ದೂರದಲ್ಲಿ ಬ್ರಾಂದಿ ಅಂಗಡಿ, ಬಾರ್‍ಗಳನ್ನು ಈ ಹಿಂದೆ ಸ್ಥಳಾಂತರಿಸಲಾಗಿದ್ದು, ಈಗ ಮತ್ತೆ ಪಟ್ಟಣದ ಒಳಗೆ ಬಾರ್ ಕಾರ್ಯನಿರ್ವಹಿಸುವದರಿಂದ ಇಂತಹ ಗಲಾಟೆ ಪ್ರಕರಣಗಳು ಮರುಕಳಿಸುತ್ತಿವೆ ಎಂದು ಪಿಎಸ್‍ಐ ಜಯರಾಮ್ ಪತ್ರಿಕೆಗೆ ತಿಳಿಸಿದ್ದಾರೆ.