ಮಡಿಕೇರಿ, ನ. 22: ಕೊಡಗಿನಲ್ಲಿ ಮಳೆ - ಬೆಳೆಯ ಆದಿದೈವ ಎಂಬ ಖ್ಯಾತಿಯುಳ್ಳ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ತಾ. 23 ರಂದು (ಇಂದು) ವಿಶೇಷ ಪೂಜೆಯೊಂದಿಗೆ ಸಂಪ್ರದಾಯದಂತೆ, ರಾತ್ರಿ ದೇವರಿಗೆ ಕದಿರು ತೆಗೆಯುವದು ಸೇರಿದಂತೆ ದೈವಿಕ ಕೈಂಕರ್ಯಗಳು ಜರುಗಲಿವೆ. ಮಧ್ಯಾಹ್ನ ಸನ್ನಿಧಿಯಲ್ಲಿ ಮಹಾಪೂಜೆ ಬಳಿಕ ಮೂಲ ಸ್ಥಾನ ಮಲ್ಮ ಬೆಟ್ಟಕ್ಕೆ ತೆರಳಿ ಅಲ್ಲಿ ವರ್ಷಾ ವಧಿಯ ಪೂಜೆ ನೆರವೇರಲಿದೆ.ಮಲ್ಮದಿಂದ ಮರಳಿ ಸನ್ನಿಧಿಗೆ ಬಂದ ಬಳಿಕ ದೇವತಾ ಕೈಂಕ ರ್ಯಗಳು ಮುಂದುವರಿಯಲಿವೆ. ವರ್ಷಂಪ್ರತಿಯಂತೆ ಈ ಬಾರಿ ತಾ. 23 ರಂದು ಹುತ್ತರಿ ಕಲಾಡ್ಚ ಉತ್ಸವ ಸಲುವಾಗಿ, ಸನ್ನಿಧಿಯಲ್ಲಿ ದೇವರ ನೃತ್ಯೋತ್ಸವ, ಪರದಂಡ ಕುಟುಂಬದಿಂದ ಮಲ್ಮಕ್ಕೆ ಎತ್ತು ಪೋರಾಟ ಇತ್ಯಾದಿ ಜರುಗಲಿದೆ.

ಸಂಜೆ ಬಳಿಕ 7.15ಕ್ಕೆ ನೆರೆಕಟ್ಟುವದು, 8.15ಕ್ಕೆ ದೇವರಿಗೆ ಕದಿರು ತೆಗೆಯುವದು, 9.15ಕ್ಕೆ ಪ್ರಸಾದವಿದೆ. ಕೊಡಗಿನ ಸಾರ್ವಜನಿಕರಿಗೆ 7.30 ನೆರೆಕುಟ್ಟುವದು, 8.30 ಕದಿರು ತೆಗೆಯುವದು, 9.30 ಭೋಜನ ಕಾಲವೆಂದು ನಿಗದಿಗೊಂಡಿದೆ.

ಮೋಡ ಸೃಷ್ಟಿಸಿ ಆತಂಕ

ಕೊಡಗಿನ ಹುತ್ತರಿ ಆಚರಣೆಗೆ ಸಂಪ್ರದಾಯದಂತೆ ಜನತೆ ತಯಾರಿ ನಡೆಸುತ್ತಿರುವ ಬೆನ್ನಲ್ಲೇ ಆಗಸದೊಳು ವ್ಯಾಪಿಸಿಕೊಂಡಿರುವ ದಟ್ಟ ಮೋಡದ ನಡುವೆ ಜಿನುಗುತ್ತಿರುವ ಮಳೆಯು, ನಾಡಿನೆಲ್ಲೆಡೆ ಇನ್ನಷ್ಟು ಆತಂಕ ಮೂಡಿಸಿದೆ. ಬಹಳಷ್ಟು ಮಂದಿ ಪರಿಹಾರ ಕೇಂದ್ರಗಳನ್ನು ತೊರೆದು ತಮ್ಮ ಅಳಿದುಳಿದಿರುವ ಮನೆಗಳತ್ತ ತೆರಳಿ ಹುತ್ತರಿ ಆಚರಣೆಯ ತಯಾರಿಯಲ್ಲಿದ್ದಾರೆ. ಈ ಮುನ್ನ ಕೈಲ್‍ಮುಹೂರ್ತ, ತುಲಾ ಸಂಕ್ರಮಣ ಆಚರಿಸಲಾಗದೆ ಹುತ್ತರಿ ಯನ್ನಾದರೂ ಸಂಪ್ರದಾಯದಂತೆ ಕನಿಷ್ಟ ಸಾಂಕೇತಿಕವಾಗಿ ಆಚರಿಸ ಹೊರಟವರಿಗೆ ಈ ಹವಾಮಾನ ನೆಮ್ಮದಿ ಕೆಡಿಸಿದೆ.

ಮುಂದಿನ 24 ಗಂಟೆಗಳಲ್ಲಿ ಕದಿರು ತೆಗೆಯುವದು ಸೇರಿದಂತೆ ಒಂದು ವಾರದ ತನಕ ಗ್ರಾಮ ಗ್ರಾಮಗಳಲ್ಲಿ ಜರುಗಲಿರುವ ಹುತ್ತರಿ ಕೋಲಾಟಕ್ಕೆ ಹವಾಮಾನ ಅವಲಂಬನೆಯಾಗಲಿದೆ. ಒಂದು ವೇಳೆ ಬಿಸಿಲು ದೂರವಾಗಿ ಮಳೆಯಾದರೆ ಬಯಲಲ್ಲಿ ಜರುಗುವ ಕೋಲಾಟಕ್ಕೆ ತೊಡಕಾಗುವ ಕಳವಳ ಎದುರಾಗಿದೆ.