ಮಡಿಕೇರಿ, ನ. 24 : ಕೊಡಗಿನಲ್ಲಿರುವ ಕುರುಬ ಜನಾಂಗವನ್ನು ಆಡಳಿತ ವ್ಯವಸ್ಥೆ ನಿರಂತರವಾಗಿ ಕಡೆಗಣಿಸುತ್ತಾ ಬಂದಿರುವದರಿಂದ ತಾ. 26 ರಂದು ಜಿಲ್ಲಾಡಳಿತದ ವತಿಯಿಂದ ನಡೆಯುವ ಕನಕ ಜಯಂತಿಯನ್ನು ಬಹಿಷ್ಕರಿಸುವದಾಗಿ ಕೊಡಗು ಜಿಲ್ಲಾ ಕುರುಬ ಸಂಘ ತಿಳಿಸಿದೆ.
ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎಸ್. ಮಹೇಶ ಕನಕ ಜಯಂತಿ ಬಹಿಷ್ಕಾರದ ಮೂಲಕ ಜಿಲ್ಲಾಡಳಿತಕ್ಕೆ ಮುನ್ಸೂಚನೆ ನೀಡಲಾಗುವದು, ಇದಕ್ಕೂ ಸ್ಪಂದನೆ ದೊರೆಯದಿದ್ದಲ್ಲಿ ಮುಂದಿನ ಹೋರಾಟದ ಬಗ್ಗೆ ಚಿಂತನೆ ನಡೆಸಲಾಗುವದು ಎಂದು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕುರುಬ ಜನಾಂಗದ ಸ್ಥಿತಿ, ಗತಿ ಹೀನಾಯವಾಗಿದ್ದು, ವಾಸಿಸಲು ಸ್ವಂತ ಮನೆಯಿಲ್ಲದ ಅನೇಕ ಕುಟುಂಬಗಳಿವೆ. ಬಹುತೇಕರು ಕೂಲಿ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದು, ಈ ಜನಾಂಗವನ್ನು ಪರಿಶಿಷ್ಟ ಪಂಗಡದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪಟ್ಟಿಗೆ ಸೇರಿಸಿದ್ದರೂ ಇಲ್ಲಿಯವರೆಗೆ ಸರಕಾರದ ಯಾವದೇ ಸೌಲಭ್ಯಗಳು ಲಭಿಸಿಲ್ಲ ಎಂದು ಆರೋಪಿಸಿದ್ದಾರೆ.
ಕÀಳೆದ ಬಾರಿ ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಜನಾಂಗಕ್ಕೆ ಬಂದ ಅನುದಾನವನ್ನು ದಿಡ್ಡಳ್ಳಿ ನಿರಾಶ್ರಿತರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಮಹೇಶ ಆರೋಪಿಸಿದ್ದಾರೆ. ಗುಮ್ಮನಕೊಲ್ಲಿ ಗ್ರಾಮದಲ್ಲಿ ಕುರುಬ ಸಮುದಾಯ ಭವನ ನಿರ್ಮಾಣ ಮಾಡಲು ಸರ್ವೇ ನಂ. 5/1ಪಿ2 0.25 ಸೆಂಟ್ ಜಾಗವನ್ನು ಮಂಜೂರು ಮಾಡಲು ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿ ಹಿಂದಿನ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಜಾಗ ಮಂಜೂರು ಮಾಡಲು ಆದೇಶಿಸಿದ್ದರು.
ಆಡಳಿತ ವ್ಯವಸ್ಥೆ ನಿರಂತರವಾಗಿ ಕುರುಬ ಜನಾಂಗವನ್ನು ನಿರ್ಲಕ್ಷಿಸುತ್ತಲೇ ಬಂದಿರುವದರಿಂದ ಈ ಬಾರಿಯ ಕನಕ ಜಯಂತಿಯನ್ನು ಬಹಿಷ್ಕರಿಸಲಿದೆ ಎಂದು ತಿಳಿಸಿದ್ದಾರೆ.