ಸೋಮವಾರಪೇಟೆ, ನ. 22: ಮಾಜಿ ಸಚಿವ ಬಿ.ಎ. ಜೀವಿಜಯ ಅವರು ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿ ಸೋಮವಾರಪೇಟೆ ತಾಲೂಕಿಗೆ ರೂ. 35 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಆದರೆ ಚುನಾವಣೆಯಲ್ಲಿ ಗೆಲವು ಸಾಧಿಸಿದವರು ಅಭಿವೃದ್ಧಿ ಕಾರ್ಯ ಮರೆತಿದ್ದಾರೆ ಎಂದು ಜೆಡಿಎಸ್ ಪ್ರಮುಖರು ಟೀಕಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್ಕುಮಾರ್, ಜೀವಿಜಯ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ಪ್ರಭಾವ ಬಳಸಿ ಸೋಮವಾರಪೇಟೆಗೆ ರೂ. 35 ಕೋಟಿ ಅನುದಾನ ತರಲು ಯಶಸ್ವಿಯಾಗಿದ್ದಾರೆ ಎಂದರು.
2018-19ನೇ ಸಾಲಿನಲ್ಲಿ ಕೊಡಗು ವಿಶೇಷ ಪ್ಯಾಕೇಜ್ ಅಡಿಯಲ್ಲಿ 32 ಜಿ.ಪಂ. ರಸ್ತೆಗಳ ಅಭಿವೃದ್ಧಿಗೆ ರೂ. 25 ಕೋಟಿ, ವಿಶೇಷ ಪ್ಯಾಕೇಜ್ ಯೋಜನೆಯಡಿ 85 ರಸ್ತೆಗಳಿಗೆ ರೂ. 4 ಕೋಟಿ ಅನುದಾನವನ್ನು ಸಚಿವ ರೇವಣ್ಣ ಅವರ ಮುಖಾಂತರ ಮಂಜೂರು ಮಾಡಿಸಿದ್ದು, ಲೋಕೋಪಯೋಗಿ ಇಲಾಖೆ ಕಾಮಗಾರಿ ನಿರ್ವಹಿಸಲಿದೆ ಎಂದು ತಿಳಿಸಿದರು.
ಇದರೊಂದಿಗೆ ಎಸ್ಇಪಿ ಯೋಜನೆಯಡಿ ರೂ. 5 ಕೋಟಿ ಹಾಗೂ ಎಸ್ಟಿಪಿ ಯೋಜನೆಯಡಿ ರೂ. 1 ಕೋಟಿ ಅನುದಾನ ಮಂಜೂರಾಗಿದೆ. ಶತಮಾನೋತ್ಸವ ಭವನ ನಿರ್ಮಾಣಕ್ಕೆ ರೂ. 3.60 ಕೋಟಿಗೆ ಕ್ರಿಯಾಯೋಜನೆ ತಯಾರಿಸಲಾಗಿದ್ದು, ಸದ್ಯದಲ್ಲೇ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದರು.
ಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಕೆ.ಟಿ. ಪರಮೇಶ್ ಮಾತನಾಡಿ, ಬಹು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಸೋಮವಾರಪೇಟೆ-ಶಾಂತಳ್ಳಿ-ಹೆಗ್ಗಡಮನೆ-ಸುಬ್ರಮಣ್ಯ ರಸ್ತೆ ಕಾಮಗಾರಿಗೂ ಮರುಜೀವ ನೀಡಲಾಗಿದ್ದು, ಒಟ್ಟಾರೆ ಕಾಮಗಾರಿಗೆ 250 ಕೋಟಿಯ ಕ್ರಿಯಾಯೋಜನೆ ಸಿದ್ಧವಾಗಿದ್ದು, ಡಿಪಿಆರ್ ಸರ್ವೆಗೆ ಲೋಕೋಪಯೋಗಿ ಸಚಿವ ರೇವಣ್ಣ ಸೂಚನೆ ನೀಡಿದ್ದಾರೆ ಎಂದರು.
ಈ ರಸ್ತೆ ನಿರ್ಮಾಣವಾದರೆ ಸೋಮವಾರಪೇಟೆಯಿಂದ ಕೇವಲ 45 ಕಿ.ಮೀ. ದೂರದಲ್ಲಿ ಸುಬ್ರಹ್ಮಣ್ಯ ತಲಪಬಹುದಾಗಿದೆ ಎಂದು ಪರಮೇಶ್ ತಿಳಿಸಿದರು.
ಗೋಷ್ಠಿಯಲ್ಲಿ ಶಾಂತಳ್ಳಿ ಗ್ರಾ.ಪಂ. ಸದಸ್ಯ ತ್ರಿಶೂಲ್, ಯುವ ಜೆಡಿಎಸ್ ಅಧ್ಯಕ್ಷ ಪ್ರವೀಣ್ಕುಮಾರ್, ಬಗ್ಗನ ಹರೀಶ್ ಉಪಸ್ಥಿತರಿದ್ದರು.