ಸುಂಟಿಕೊಪ್ಪ, ನ. 22: ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆ (ಕಾರ್ಡ್) ಸಹಭಾಗಿತ್ವದಲ್ಲಿ ಕೊಡಗು ಚೈಲ್ಡ್ ಲೈನ್ ಆಶ್ರಯದಲ್ಲಿ ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಬಾಲ್ಯ ವಿವಾಹ ನಿಷೇಧದ ಬಗ್ಗೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕಾಯ್ದೆ ಮತ್ತು ದೈಹಿಕ ದಂಡನೆ ವಿಷಯದ ಬಗ್ಗೆ ಸ್ತ್ರೀ ಶಕ್ತಿ, ಸ್ವ ಸಹಾಯ ಸಂಘದ ಮಹಿಳೆಯರಿಗೆ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಮ್, ಹಿಂದಿನ ಕಾಲದಲ್ಲಿ ಮೂಡನಂಬಿಕೆ ಮತ್ತು ಅನಕ್ಷರತೆಯ ಹಿನ್ನೆಲೆ ಹೆಣ್ಣು ಮಕ್ಕಳು ಪೋಷಕರ ಮತ್ತು ಸಮಾಜದ ಅಡೆತಡೆಯಿಲ್ಲದೆ ಬಾಲ್ಯ ವಿವಾಹ ಸಾಮಾನ್ಯವಾಗಿತ್ತು. ಆದರೆ ಇಂದು ಸಮಾಜ ಸಬಲೀಕರಣದ ಕಾರಣದಿಂದ ಹಲವಾರು ಕಾಯಿದೆಗಳು ಜಾರಿಗೆ ಬಂದುದರಿಂದ ಒತ್ತಾಯ ಪೂರ್ವಕ ವಾಗಿ ಹೆಣ್ಣು ಮಕ್ಕಳನ್ನು ವಿವಾಹ ಮಾಡಿಸುವದು ಅಪರಾಧ ವಾಗುತ್ತದೆ ಎಂದರಲ್ಲದೇ, ಬಾಲ್ಯ ವಿವಾಹ ಮಾಡಿದ್ದು ಅಥವಾ ಮಾಡಿಸಿದ್ದು ಕಂಡು ಬಂದಲ್ಲಿ ಅಂತವರು ಶಿಕ್ಷೆಗೆ ಒಳಗಾಗುತ್ತಾರೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯ ವಾಗಿಡಲಾಗುವದು ಎಂದು ಸಲಹೆ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕ ಚಂದ್ರೇಶ್ ಮಾತನಾಡಿ, ಬಾಲ್ಯ ವಿವಾಹ ಮಾಡಿದಲ್ಲಿ ಹದಿಹರೆಯದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಯಲ್ಲಿ ಕುಂಠಿತವಾಗುವದಲ್ಲದೇ ಹೆರಿಗೆಯ ಸಂದರ್ಭ ವಿಪರೀತ ರಕ್ತಸ್ರಾವವಾಗಿ ತಾಯಿ ಸಾವನ್ನಪ್ಪುವ ಸಂಭವ ಹೆಚ್ಚಾಗಲಿದೆ. ತಾಯಿ-ಮಗು ಮರಣ ಹೊಂದುವ ಸಾಧ್ಯತೆ ಇದೆ ಎಂದರು. ವೇದಿಕೆಯಲ್ಲಿ ಚೈಲ್ಡ್‍ಲೈನ್ ಸಂಯೋಜಕ ನವಿನ್ ಕುಮಾರ್, ಗ್ರಾ.ಪಂ. ಸದಸ್ಯೆ ಶೋಭ ರವಿ, ಆಶಾ ಕಾರ್ಯಕರ್ತೆ ಪಾರ್ವತಿ, ಚೈಲ್ಡ್‍ಲೈನ್ ಕಾರ್ಯಕರ್ತರಾದ ಕುಸುಮ, ಪ್ರವೀಣ್, ಬಿ.ಕೆ. ಕುಮಾರಿ ಇತರರು ಇದ್ದರು.