ಶ್ರೀಮಂಗಲ, ನ. 22: ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾವಳಗೇರಿ ಗ್ರಾಮದಲ್ಲಿ ಗುಂಡು ಹೊಡೆದು ಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.ದೇಕಮಾಡ ಸಾಬುದೇವಯ್ಯ ಅವರ ಕಿರಿಯ ಪುತ್ರ ಕಾರ್ಯಪ್ಪ (23) ಆತ್ಮಹತ್ಯೆ ಮಾಡಿಕೊಂಡಿರುವ ಯುವಕನಾಗಿದ್ದಾನೆ. ಗುರುವಾರ ಬೆಳಿಗ್ಗೆ 7.45 ಗಂಟೆಗೆ ತನ್ನ ಮನೆಯ ಮಲಗುವ ಕೋಣೆಯಲ್ಲಿ ಪಿಸ್ತೂಲ್ನಿಂದ ಕಿವಿಯ ಭಾಗಕ್ಕೆ ಗುಂಡು ಹಾರಿಸಿಕೊಂಡು ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.ಮನೆಯಲ್ಲಿ ತಂದೆ, ತಾಯಿ, ಅಣ್ಣ, ಅತ್ತಿಗೆ ಇದ್ದಾಗಲೇ ಈ ಘಟನೆ ನಡೆದಿದೆ. ಮೃತ ಯುವಕ ತನ್ನ ತಂದೆ ಮತ್ತು ಅಣ್ಣನೊಂದಿಗೆ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯಾಪಾರ ಮಳಿಗೆ ಅಲ್ಲದೇ ಟಿ. ಶೆಟ್ಟಿಗೇರಿಯಲ್ಲಿಯೂ ದಿನಸಿ ಅಂಗಡಿ ಮತ್ತು ವ್ಯಾಪಾರ ಮಳಿಗೆ ಹೊಂದಿದ್ದು, ಜಂಟಿಯಾಗಿ ಉತ್ತಮ ವ್ಯಾಪಾರ ನಡೆಸುತ್ತಿದ್ದರು. ಮೂಲತಃ ರೈತ ಕುಟುಂಬವಾಗಿದ್ದರೂ ಕಾಫಿ, ಅಡಿಕೆ, ಶುಂಠಿ ಇತ್ಯಾದಿ ಖರೀದಿ ವ್ಯಾಪಾರ ಮಾಡುತ್ತಿದ್ದರು.
ಕಾರ್ಯಪ್ಪ ಅವಿವಾಹಿತನಾಗಿದ್ದು, ಸಾರ್ವಜನಿಕರರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದು, ಸ್ನೇಹಜೀವಿ ಆಗಿದ್ದ ಆದರೆ ಆತ್ಮಹತ್ಯೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಶ್ರೀಮಂಗಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.