ಸೋಮವಾರಪೇಟೆ, ನ. 20: ತಾಲೂಕು ಪಂಚಾಯಿತಿಯ ಅಧ್ಯಕ್ಷರು ತಮ್ಮ ಕಚೇರಿಗೆ ಅಧಿಕಾರಿಗಳನ್ನು ಕರೆಸಿಕೊಂಡು, ಪತಿಯ ಮೂಲಕ ಪ್ರಶ್ನಿಸುತ್ತಿರುವ ಬೆಳವಣಿಗೆ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂಬ ಅಭಿಪ್ರಾಯ ಸಾಮಾನ್ಯ ಸಭೆಯಲ್ಲಿ ಕೇಳಿಬಂದು, ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನಡುವೆ ಮಾತಿನ ಚಕಮಕಿ ಏರ್ಪಡಲು ಕಾರಣವಾಯಿತು.
ತಾ.ಪಂ. ಸಾಮಾನ್ಯ ಸಭೆ ಅಧ್ಯಕ್ಷೆ ಪುಷ್ಪಾ ರಾಜೇಶ್ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ನಡೆದ ಸಂದರ್ಭ, ಇದೇ ವಿಷಯದ ಬಗ್ಗೆ 20 ನಿಮಿಷಗಳಿಗೂ ಅಧಿಕ ಕಾಲ ಚರ್ಚೆಯಾಯಿತು.
ಸಭೆಯ ಆರಂಭದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿಸಲು ವಿಳಂಬವಾಗುತ್ತಿರುವ ಬಗ್ಗೆ ಸದಸ್ಯರುಗಳು, ಅಧ್ಯಕ್ಷರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಮಾತನಾಡಿ, ಅಧ್ಯಕ್ಷರ ಪತಿ ರಾಜೇಶ್, ತಾಪಂ ಅಧ್ಯಕ್ಷರ ಕೊಠಡಿಯಲ್ಲಿ ಅಧಿಕಾರಿಗಳನ್ನು ಕರೆದು, ಆದೇಶವನ್ನು ನೀಡುತ್ತಿದ್ದಾರೆ. ಅಧ್ಯಕ್ಷರ ಅಧಿಕಾರವನ್ನು ದುರಪಯೋಗಪಡಿಸಿಕೊಳ್ಳುವದು ಸರಿಯಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷೆ ಪುಷ್ಪ, ತನಗೆ ಸರ್ಕಾರದ ವತಿಯಿಂದ ವಾಹನ ಕೊಟ್ಟಿಲ್ಲ. ನನ್ನನ್ನು ಕಚೇರಿಗೆ ಪತಿಯೇ ಕರೆದುಕೊಂಡು ಬರಬೇಕು. ಅವರು ಬರುವದು ಬೇಡ ಎಂದಾದರೆ ವಾಹನ ಸೌಲಭ್ಯ ಒದಗಿಸಿ ಕೊಡಿ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗೆ ಹೇಳಿದರು.
ಮುಚ್ಚಿದ ಲಕೋಟೆಯಲ್ಲಿ ಸರಕಾರದಿಂದ ಅಧ್ಯಕ್ಷರಿಗೆ ಬರುವ ಪತ್ರಗಳನ್ನು ಅಧಿಕಾರಿಗಳು ಮೊದಲೇ ಓದಿ ನನಗೆ ನೀಡುತ್ತಿದ್ದಾರೆ. ಅಂತಹವರ ಮೇಲೆ ನಿಗಾ ಇಡಬೇಕೆಂದು ಅಧ್ಯಕ್ಷೆ, ಕಾರ್ಯನಿರ್ವಹಣಾಧಿಕಾರಿ ಸುನಿಲ್ ಅವರಿಗೆ ಸೂಚಿಸಿದರು. ಇದೇ ವಿಚಾರಗಳಿಗೆ ಸಂಬಂಧಿಸಿದಂತೆ ಕೆಲ ನಿಮಿಷಗಳ ಕಾಲ ತೀವ್ರ ಮಾತಿನ ಚಕಮಕಿ ನಡೆಯಿತು.
ದೊಂಬರಾಟ ನೋಡಲು ಬಂದಿಲ್ಲ: ಈ ಸಂದರ್ಭ ಸದಸ್ಯರುಗಳಾದ ವಿಜು ಚಂಗಪ್ಪ ಮತ್ತು ಎನ್.ಎಸ್. ಜಯಣ್ಣ ಮಧ್ಯೆ ಪ್ರವೇಶಿಸಿ, ತಾಲೂಕು ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗು ಕಾರ್ಯನಿರ್ವಾಹಣಾಧಿಕಾರಿಗಳ ದೊಂಬರಾಟ ನೋಡಲು ನಾವುಗಳು ಬಂದಿಲ್ಲ. ವೈಯುಕ್ತಿಕ ಚರ್ಚೆಗಳು, ಆರೋಪಗಳು ಇದ್ದರೆ ತಮ್ಮ ಕಚೇರಿಯಲ್ಲಿ ಬಗೆಹರಿಸಿಕೊಳ್ಳಿ. ಇತರ ಸದಸ್ಯರು ಮತ್ತು ಅಧಿಕಾರಿಗಳ ಸಮಯವನ್ನು ವ್ಯರ್ಥ ಮಾಡಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಪಂ ಸಾಮಾನ್ಯ ಸಭೆಗಳಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಸಭೆಯನ್ನು ನಡೆಸುವ ಅವಶ್ಯಕತೆಯಾದರೂ ಯಾಕೆ? ಎಂದು ವಿಜು ಚಂಗಪ್ಪ ಪ್ರಶ್ನಿಸಿದರು.
ಮರ ಸಾಗಾಟಕ್ಕೆ ಅನುಮತಿ ಕೋರಿ ನಿರ್ಣಯ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ತೋಟದೊಳಗೆ ಬಿದ್ದಿರುವ ಸಿಲ್ವರ್ ಮರ ಮಾರಾಟ ಮಾಡಲು ಅರಣ್ಯ ಇಲಾಖೆಯವರು ಅನುಮತಿ ನೀಡಿದ್ದಾರೆ. ಆದರೆ ಸಾಗುವಳಿ ಜಮೀನಿನಲ್ಲಿ ಬಿದ್ದಿರುವ ಇತರ ಜಾತೀಯ ಮರಗಳನ್ನು ಸಾಗಿಸಲು ಅನುಮತಿ ನೀಡುತ್ತಿಲ್ಲ. ಪ್ರಕೃತಿ ವಿಕೋಪ ನಡೆದ ಜಾಗದಲ್ಲಿ ಕೊಚ್ಚಿಕೊಂಡು ಬಂದಿರುವ ಮರಗಳನ್ನು ತೆರವುಗೊಳಿಸಲು ಇಲಾಖೆಯವರು ಅನುಮತಿ ನೀಡಬೇಕು ಎಂದು ಸದಸ್ಯ ಅನಂತಕುಮಾರ್ ಒತ್ತಾಯಿಸಿದರು. ಸಾಗುವಳಿ ಜಾಗದಲ್ಲಿ ಬಿದ್ದಿರುವ ಮರಗಳನ್ನು ಸಾಗಿಸಲು ಜಿಲ್ಲಾಧಿಕಾರಿಗಳು ಅನುಮತಿ ನೀಡಬೇಕೆಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಕೂಡುಮಂಗಳೂರು ವ್ಯಾಪ್ತಿಗೆ ಸೇರುವ ಶಿಕ್ಷಕರ ತರಬೇತಿ ಕೇಂದ್ರದ ಆವರಣದಲ್ಲಿರುವ ಮೂರು ಒಣಗಿದ ಮರಗಳನ್ನು ತೆರವುಗೊಳಿಸುವಂತೆ ಕಳೆದ ಎರಡು ವರ್ಷಗಳಿಂದ ಮನವಿ ಮಾಡುತ್ತಿದ್ದರೂ, ಇದುವರೆಗೂ ತೆರವುಗೊಳಿಸಿಲ್ಲ ಎಂದು ಗಣೇಶ್ ಸಭೆಯ ಗಮನಕ್ಕೆ ತಂದರು. ಒಂದು ವಾರದಲ್ಲಿ ತೆರವುಗೊಳಿಸುವದಾಗಿ ಕುಶಾಲನಗರ ವಲಯಾರಣ್ಯಾಧಿಕಾರಿ ತಿಳಿಸಿದರು.
ಬೇನಾಮಿ ಗುತ್ತಿಗೆದಾರರು: ಸದಸ್ಯ ಸತೀಶ್ ಮಾತನಾಡಿ, ಆರ್ಟಿಐ ಕಾರ್ಯಕರ್ತರ ಹೆಸರಿನಲ್ಲಿ ಕೆಲವರು ತಾಪಂ ನಿರ್ಣಯವನ್ನು ಪ್ರಶ್ನಿಸಿದ್ದಾರೆ. ಕಳಪೆ ಕೆಲಸ ಮಾಡಿದ ಗುತ್ತಿಗೆದಾರರಿಗೆ ಹಣ ಪಾವತಿಸುವಂತೆ ಸದಸ್ಯರುಗಳು ಒತ್ತಾಯಿಸಿದ್ದಾರೆ ಎಂದು ಆರೋಪಿಸುವ ಮೂಲಕ ಸದಸ್ಯರುಗಳಿಗೆ ಅವಮಾನ ಮಾಡಿದ್ದಾರೆ. ಕೆಲಸ ಮಾಡಿದವರಿಗೆ ಮಾತ್ರ ಹಣ ಪಾವತಿ ಮಾಡಿ ಎಂದು ನಿರ್ಣಯ ಮಾಡಲಾಗಿದೆ ಎಂದರಲ್ಲದೇ, ಪ್ರತಿಭಟನೆಯ ಬೆದರಿಕೆ ಒಡ್ಡುತ್ತಿರುವವರೇ ಇದೀಗ ಬೇನಾಮಿ ಹೆಸರಿನಲ್ಲಿ ಗುತ್ತಿಗೆದಾರರಾಗಿದ್ದಾರೆ ಎಂದು ಆರೋಪಿಸಿದರು.
ಮುಂದಿನ ಸಭೆಯೊಳಗೆ ಮಳೆಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾದ ಕಾಮಗಾರಿಗಳ ಸಂಪೂರ್ಣ ವಿವರ, ಏಜೆನ್ಸಿ ಮತ್ತು ಗುತ್ತಿಗೆದಾರರ ಹೆಸರು ಮತ್ತು ಸಂಬಂಧಪಟ್ಟ ಅಭಿಯಂತರರ ಹೆಸರನ್ನು ತಿಳಿಸಬೇಕೆಂದು ಲೋಕೋಪಯೋಗಿ ಇಲಾಖೆಯ ಅಭಿಯಂತರ ವೆಂಕಟೇಶ್ ನಾಯಕರಿಗೆ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಸೂಚಿಸಿದರು.
ಎರಡೆರಡು ಬಾರಿ ಬಿಲ್: ತಾಲೂಕಿನ ಹಲವಷ್ಟು ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ಕಾಮಗಾರಿಗಳಿಗೆ ಎರಡೆರಡು ಬಾರಿ ಬಿಲ್ ಮಾಡಲಾಗಿದೆ. ಅಂಗನವಾಡಿ ಕೇಂದ್ರ ಹೆಂಚು ಮತ್ತು ಮರಮುಟ್ಟುಗಳನ್ನು ಗುತ್ತಿಗೆದಾರರೆ ಸಾಗಿಸಿದ್ದಾರೆ. ಕೆಲವು ಕಡೆ ಹಳೆ ಮರಕ್ಕೆ ಬಣ್ಣ ಬಳಿದು ಅಳವಡಿಸಿ ಬಿಲ್ ಪಡೆದುಕೊಂಡಿದ್ದಾರೆ. ಈ ಬಗ್ಗೆ ಸಂಪೂರ್ಣ ವರದಿಯನ್ನು ತಾಲೂಕು ಪಂಚಾಯಿತಿಗೆ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಜಿಪಂ ಕಾರ್ಯಪಾಲಕ ಅಭಿಯಂತರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಿಶು ಅಭಿವೃದ್ಧಿ ಯೋಜನಾಧಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವದು ಎಂದು ಸರ್ವ ಸದಸ್ಯರು ಎಚ್ಚರಿಸಿದರು.
ನೀರು ಕೊಡದಿದ್ದರೆ ಪ್ರತಿಭಟನೆ: ಅಂಬೇಡ್ಕರ್ ವಸತಿ ಶಾಲೆ ಹಾಗೂ ಬಿಸಿಎಂ ಹಾಸ್ಟೇಲ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಸೋಮವಾರದೊಳಗೆ ಪರಿಹರಿಸದಿದ್ದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ಮಾಡಲಾಗುವದು ಎಂದು ಉಪಾಧ್ಯಕ್ಷ ಅಭಿಮನ್ಯು, ಸ್ಥಾಯಿ ಸಮಿತಿ ಅಧ್ಯಕ್ಷೆ ತಂಗಮ್ಮ ಅವರುಗಳು, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರ, ಬಿಸಿಎಂ ಅಧಿಕಾರಿ, ಸಮಾಜ ಕಲ್ಯಾಣ ಇಲಾಖಾಧಿಗಳಿಗೆ ಎಚ್ಚರಿಕೆ ನೀಡಿದರು. ವೇದಿಕೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಉಪಸ್ಥಿತರಿದ್ದರು.