ಸೋಮವಾರಪೇಟೆ, ಸೆ. 23: ಮಾದಾಪುರ- ಮಡಿಕೇರಿ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕವಾಗಿ ಅನುವು ಮಾಡಿಕೊಟ್ಟಿದ್ದರೂ ಉಳಿದಂತೆ ಕಾಮಗಾರಿ ಭರದಿಂದ ಸಾಗುತ್ತಿದೆ.ಹಟ್ಟಿಹೊಳೆಯಿಂದ ಮುಂದೆ ಕಾಂಡನಕೊಲ್ಲಿ ತಿರುವಿನಲ್ಲಿ ಬರೆ ಕುಸಿತಕ್ಕೆ ಒಳಗಾದ ರಸ್ತೆ ಸಂಪೂರ್ಣವಾಗಿ ಕೊಚ್ಚಿಹೋಗಿತ್ತು. ಇಲ್ಲಿ ರಸ್ತೆಯ ಪುನರ್ ನಿರ್ಮಾಣ ಕಾರ್ಯ ಸಾಗುತ್ತಿದ್ದು, ಕುಸಿದಿರುವ ರಸ್ತೆಗೆ ತಡೆಗೋಡೆಯ ಕಾಮಗಾರಿ ನಡೆಯುತ್ತಿದೆ. ಶಾಸಕ ಅಪ್ಪಚ್ಚು ರಂಜನ್‍ರವರು ಕಾಮಗಾರಿ ನಡೆಯುತ್ತಿರುವ ಎಲ್ಲಾ ಸ್ಥಳಗಳಿಗೆ ಭೇಟಿ ನೀಡುತ್ತಾ, ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂದರ್ಭ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಪ್ರವಾಹ ಹಾಗೂ ಬರೆ ಕುಸಿತದಿಂದ ಹಾನಿಗೊಳಗಾದ ರಸ್ತೆಗಳನ್ನು ದುರಸ್ಥಿ ಪಡಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಬಹುತೇಕ ಗ್ರಾಮಗಳ ರಸ್ತೆಗಳಲ್ಲಿ ತುಂಬಿದ್ದ ಮಣ್ಣನ್ನು ತೆರವು ಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಹಾಗೆಯೇ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಂಪರ್ಕದ ಪೈಪುಗಳು ಕೂಡ ಕೊಚ್ಚಿಹೋಗಿದ್ದು ಅಂತಹ ಗ್ರಾಮಗಳಲ್ಲಿ ನೀರಿನ ಸಂಪರ್ಕ ಸರಿಪಡಿಸಲು ಪೈಪ್‍ಗಳನ್ನು ಖರೀದಿಸಿ ನೀಡಲಾಗಿದೆ ಎಂದರು.