ಮಡಿಕೇರಿ, ಸೆ. 22: ಕಳೆದ ತಿಂಗಳ 28ರಂದು ಮಡಿಕೇರಿಯ ವಕೀಲರ ಸಂಘ ನ್ಯಾಯಾಲಯ ಬಹಿಷ್ಕಾರ ಹಾಕಿರುವದನ್ನು ಆಕ್ಷೇಪಿಸಿ ಅವರ ವಿರುದ್ಧವೇ ವಕೀಲರೊಬ್ಬರು ನೋಟೀಸ್ ಜಾರಿ ಮಾಡಿದ್ದು, ನ್ಯಾಯಾಲಯ ನಿಂದನೆ ಮೊಕದ್ದಮೆ ಹೂಡುವದಾಗಿ ತಿಳಿಸಿದ್ದಾರೆ.

ತಾ. 28ರಂದು ತುರ್ತು ಸಭೆ ಕರೆದ ಮಡಿಕೇರಿ ವಕೀಲರ ಸಂಘ, ವಕೀಲ ಮನೋಜ್ ಬೋಪಯ್ಯ ಅವರನ್ನು ಪೊಲೀಸ್ ಅಧಿಕಾರಿಯೊಬ್ಬರು ಅಗೌರವದಿಂದ ಕಂಡಿದ್ದಾರೆಂದು ಮೊಕದ್ದಮೆ ದಾಖಲಿಸಿದ್ದನ್ನು ಖಂಡಿಸಿ, 1 ಗಂಟೆ ನ್ಯಾಯಾಲಯವನ್ನು ಬಹಿಷ್ಕರಿಸಿತ್ತು. ಈ ಬಗ್ಗೆ ಹಿರಿಯ ವಕೀಲ ಬಿ.ಎ. ಮಾಚಯ್ಯ ಅವರು ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳಿಗೆ ನೋಟೀಸ್ ಜಾರಿ ಮಾಡಿ ನ್ಯಾಯಾಲಯಕ್ಕೆ ಹಾಜರಾಗದೆ ಹಾಗೂ ಕಕ್ಷಿದಾರರಿಗೆ ತೊಂದರೆ ಮಾಡಿರುವದು ಕಾನೂನಿಗೆ ವಿರೋಧ ಎಂದು ಆಕ್ಷೇಪಿಸಿದ್ದಾರೆ. ಅಲ್ಲದೆ, ನ್ಯಾಯಾಲಯ ಬಹಿಷ್ಕರಿಸುವದು ನ್ಯಾಯಾಲಯ ನಿಂದನೆಯಾಗುತ್ತದೆಂದು ಹೇಳಿದ್ದರು. ಈ ಬಗ್ಗೆ 15 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿದ್ದರು.

ಇದುವರೆಗೂ ಸಂಘದಿಂದ ಯಾವದೇ ಉತ್ತರ ಬಾರದ ಕಾರಣ ಸಂಬಂಧಿಸಿದವರ ವಿರುದ್ಧ ನ್ಯಾಯಾಲಯ ಮೊಕದ್ದಮೆ ಹೂಡುವದಾಗಿ ಬಿ.ಎ. ಮಾಚಯ್ಯ ತಿಳಿಸಿದ್ದಾರೆ.