ಕುಶಾಲನಗರ, ಸೆ. 17 : ದುಬಾರೆ ಮತ್ತು ಆನೆಕಾಡು ಶಿಬಿರದಲ್ಲಿರುವ ಮಾವುತ, ಕಾವಾಡಿಗರಿಗೆ ಶಾಶ್ವತ ನೆಲೆಯನ್ನು ಕಲ್ಪಿಸುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ ಎಂದು ಬುಡಕಟ್ಟು ಕೃಷಿಕರ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಆರ್.ಕೆ.ಚಂದ್ರು ಆರೋಪಿಸಿದ್ದಾರೆ.
ಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಪರಂಪರೆಯ ಮೈಸೂರು ದಸರಾದಲ್ಲಿ ಜಿಲ್ಲೆಯ ಸಾಕಾನೆಗಳು ಪಾಲ್ಗೊಳ್ಳುವದು ಸಾಮಾನ್ಯವಾಗಿದೆ. ಜಿಲ್ಲೆಯ ದುಬಾರೆ ಮತ್ತು ಆನೆಕಾಡು ಶಿಬಿರದಿಂದ ಪಾಲ್ಗೊಳ್ಳುವ ಆನೆಗಳು ಹಾಗೂ ಅವುಗಳ ನಿರ್ವಹಣೆಗೆ ತೆರಳುವ ಮಾವುತ, ಕಾವಾಡಿಗ, ಅವರ ಕುಟುಂಬ ಸದಸ್ಯರಿಗೆ ಒಂದು ತಿಂಗಳ ಕಾಲ ಭಾರೀ ಆತಿಥ್ಯದೊಂದಿಗೆ ಗೌರವ ನೀಡಲಾಗುತ್ತದೆ. ದಸರಾದಿಂದ ಮರಳಿ ಬಂದ ಬಳಿಕ ಮಾವುತ, ಕಾವಾಡಿಗರ ಬದುಕು ನರಕ ಸದೃಶವಾಗಿರುತ್ತದೆ. ಶಾಶ್ವತ ಸೂರು, ಕುಡಿಯಲು ನೀರು ಇಲ್ಲದೆ, ಕಾಡಿನೊಳಗೆ ಕತ್ತಲಲ್ಲಿ ಜೀವನ ನಡೆಸುವ ಸ್ಥಿತಿ ಮುಂದುವರೆದಿದೆ ಎಂದು ಅವರು ಆರೋಪಿಸಿದರು.
ವಿಶ್ವದ ಎಲ್ಲೆಡೆಯಿಂದ ಆಗಮಿಸುವ ಪ್ರವಾಸಿಗರ ಮನಕ್ಕೆ ಮುದ ನೀಡುವ ದಸರಾ ಸಂಭ್ರಮದಲ್ಲಿ ಭಾಗವಹಿಸುವ ಮಾವುತ ಕವಾಡಿಗರ ಬದುಕಿನ ಬಗ್ಗೆ ಕನಿಷ್ಟ ಮಟ್ಟಿಗೆ ಅಧಿಕಾರಿಗಳು ಕಾಳಜಿ ವಹಿಸಬೇಕು. ದುಬಾರೆಯಲ್ಲಿರುವ 87 ಗಿರಿಜನ ಕುಟುಂಬಗಳು, ಆನೆಕಾಡಿನಲ್ಲಿರುವ 21 ಕುಟುಂಬಗಳು ಈಗಲೂ ಕೇವಲ ಪ್ಲಾಸ್ಟಿಕ್ ಶೀಟ್ನ ರಕ್ಷಣೆಯೊಂದಿಗೆ ಬದುಕು ಸಾಗಿಸುತ್ತಿದ್ದಾರೆ ಎಂದರು.
ಆನೆ ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ ಮಾವುತರಾದ ಅಣ್ಣು ಮತ್ತು ರಾಜಮಣಿ ಅವರ ಕುಟುಂಬಗಳ ಸದಸ್ಯರಿಗೆ ಸರಕಾರಿ ನೌಕರಿ ಕೊಡುವ ಮೂಲಕ ಅರಣ್ಯ ಇಲಾಖೆಯ ಅಧಿಕಾರಿಗಳು ಅವರಿಗೆ ಸಿಗಬೇಕಾದ ಆರ್ಥಿಕ ಸೌಲಭ್ಯವನ್ನು ತಕ್ಷಣ ಕಲ್ಪಿಸಬೇಕು ಎಂದರು.