ಸೋಮವಾರಪೇಟೆ,ಆ.27: ಈಗಾಗಲೇ ಜಿಲ್ಲೆಯ ಹಟ್ಟಿಹೊಳೆ, ಮಕ್ಕಂದೂರು, ಮೂವತ್ತೊಕ್ಲು, ಮೇಘತಾಳು ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂ ಕುಸಿತ ಸಂಭವಿಸಿ ಸಾಕಷ್ಟು ಹಾನಿಯಾದ ಬೆನ್ನಲ್ಲೇ, ಇದೀಗ ಶಾಂತಳ್ಳಿ ಹೋಬಳಿಯ ಕೆಲವು ಗ್ರಾಮಗಳಲ್ಲಿ ಭೂ ಕುಸಿತ ಉಂಟಾಗುತ್ತಿದ್ದು, ಭೂಗರ್ಭ ಶಾಸ್ತ್ರಜ್ಞರನ್ನು ಕರೆಸಿ ಪರಿಶೀಲಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಾಲೂಕಿನ ಶಾಂತಳ್ಳಿ ಹೋಬಳಿಯ ಕುಮಾರಳ್ಳಿ, ಬಾಚಳ್ಳಿ ಮತ್ತು ಮಲ್ಲಳ್ಳಿ ಸಮೀಪ ಕೆಲವೆಡೆ ಭೂ ಕುಸಿತ ಉಂಟಾಗುತ್ತಿದ್ದು, ಹಲವು ಮನೆಗಳ ಗೋಡೆಗಳು ಬಿರುಕು ಬಿಡುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದು, ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಇನ್ನಷ್ಟು ಆತಂಕ ಎದುರಾಗಿದೆ ಎಂದು ಮಾಹಿತಿಯಿತ್ತಿದ್ದಾರೆ.
ತಕ್ಷಣವೇ ಭೂಗರ್ಭಶಾಸ್ತ್ರಜ್ಞರನ್ನು ಕರೆಸಿ, ಭೂ ಕುಸಿತಕ್ಕೆ ಕಾರಣವಾಗಿರುವ ಅಂಶಗಳನ್ನು ಪರಿಶೀಲಿಸಬೇಕು. ಜನರು ವಾಸಿಸಲು ಯೋಗ್ಯವಾದ ಸ್ಥಳವಾಗಿದೆಯೇ ಎಂಬ ಬಗ್ಗೆ ನಿಖರವಾಗಿ ತಿಳಿಸಬೇಕೆಂದು ಕುಮಾರಳ್ಳಿ, ಬಾಚಳ್ಳಿ ಗ್ರಾಮದ ಗ್ರಾ.ಪಂ. ಸದಸ್ಯ ಎಸ್.ಕೆ. ಮಾಚಯ್ಯ, ಗ್ರಾಮಸ್ಥರಾದ ಡಿ.ಬಿ. ವಿಜಯಕುಮಾರ್, ಡಿ.ಎಸ್. ಪೊನ್ನಪ್ಪ, ಎನ್.ಪಿ. ಚಂಗಪ್ಪ, ಎ.ಎಸ್. ರುದ್ರಪ್ಪ, ಕೆ.ಎಸ್. ಮೊಗಪ್ಪ, ಡಿ.ಎಸ್.ಸುಬ್ಬಯ್ಯ, ಎ.ಎಂ. ಗಿರೀಶ್ ಮತ್ತಿತರರು ತಹಶೀಲ್ದಾರ್ ಮಹೇಶ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.