ಮಡಿಕೇರಿ ಆ. 22: ಕೃಷಿ ಜಮೀನುಗಳನ್ನು ಕೃಷಿಯೇತರ ಉದ್ದೇಶಗಳಿಗೆ ಬಳಕೆ ಮಾಡಿರುವದು, ಬೆಟ್ಟ ಗುಡ್ಡಗಳನ್ನು ಅಗೆದು ರೆಸಾರ್ಟ್, ಹೋಂ ಸ್ಟೇಗಳನ್ನು ನಿರ್ಮಿಸಿರುವದು ಕೊಡಗಿನ ಈಗಿನ ದುರಂತಗಳಿಗೆ ಕಾರಣವೆಂದು ಮಾಜಿ ಸಚಿವ ಯಂ.ಸಿ. ನಾಣಯ್ಯ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ರಕ್ಷಣೆಗೆ ವೀರಯೋಧರನ್ನು ನೀಡಿರುವ ನಾಡಾದ ಕೊಡಗಿನಲ್ಲಿ ಮಹಾಮಳೆÉಯಿಂದ ಉಂಟಾಗಿರುವ ಅಪಾರ ಹಾನಿಯಿಂದಾಗಿ ಯೋಧರ ಸಹಕಾರದಿಂದಲೆ ರಕ್ಷಣಾ ಕಾರ್ಯಗಳಿಗೆ ಮೊರೆ ಹೋಗಿರುವದು ವಿಷಾದಕರವೆಂದರು.

ಮುಖ್ಯಮಂತ್ರಿಗಳು ರಾಜ್ಯದ ರೈತರ 48 ಸಾವಿರ ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡಿದ್ದಾರೆ. ಆದರೆ, ಕೊಡಗಿನ ಜನರು ಯಾವತ್ತೂ ಸರ್ಕಾರದಿಂದ ಭಿಕ್ಷೆ ಬೇಡಿದವರಲ್ಲ. ಕಾವೇರಿ ನದಿ ನೀರನ್ನು ಬಳಕೆ ಮಾಡುವ ಪ್ರದೇಶಗಳ ಸಾಕಷ್ಟು ಜನರು ಕೊಡಗಿನ ಮತ್ತು ಕಾವೇರಿಯ ಮೇಲೆ ಅಭಿಮಾನವಿಟ್ಟು, ದೇಣಿಗೆಗಳನ್ನು ನೀಡಲು ಮುಂದೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು “ಮುಖ್ಯಮಂತ್ರಿಗಳ ಪರಿಹಾರ ನಿಧಿ-ಕೊಡಗು”ಎನ್ನುವ ಪ್ರತ್ಯೇಕ ಖಾತೆಯನ್ನು ಕೊಡಗಿನ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ತೆರೆಯಬೇಕು. ಇದರಲ್ಲಿ ಸಂಗ್ರಹವಾಗುವ ಮೊತ್ತವನ್ನು ಕೊಡಗಿನ ಸಂತ್ರಸ್ತರಿಗೆ ಶಾಶ್ವತ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಬಳಕೆ ಮಾಡಬೇಕೆಂದು ಒತ್ತಾಯಿಸಿದರು.

ನಮ್ಮ ಎಲ್ಲಾ ಆಸ್ತಿ ಪಾಸ್ತಿ, ಮನೆ ಮಠ, ತೋಟಗಳು ಮಣ್ಣಿನಡಿ ಸಿಲುಕಿದ್ದು, ಇಂತಹ ದೊಡ್ಡ ದುರಂತಕ್ಕೆ ಶೇ.30 ರಷ್ಟು ಸ್ವಯಂಕೃತ ಅಪರಾಧವೆ ಕಾರಣವೆಂದು ಅವರು ಹೇಳಿದರು. ಪರಿಸರ ನಾಶಕ್ಕೆ ಕಾರಣವಾಗುವ ಇಂತಹ ಚಟುವಟಿಕೆಗಳನ್ನು ಜಿಲ್ಲೆಯಿಂದ ಹೊರ ಹಾಕಬೇಕು. ಕೃಷಿ ಜಮೀನುಗಳನ್ನು ಕೃಷಿಯೇತರ ಚಟುವಟಿಕೆಗಳಿಗೆ ಪರಿವರ್ತಿಸುವದನ್ನು ರಾಜ್ಯ ಸರ್ಕಾರ ಕೂಡಲೆ ನಿಷೇಧಿಸಬೇಕು ಎಂದು ನಾಣಯ್ಯ ಆಗ್ರಹಿಸಿದರು.

ನಾವುಗಳು ಪ್ರವಾಸೋದ್ಯಮದ ವಿರೋಧಿಗಳಲ್ಲ. ಆದರೆ, ಮೋಜು ಮಸ್ತಿಯ ಪ್ರವಾಸೋದ್ಯಮ ಕೊಡಗಿಗೆ ಅಗತ್ಯವಿಲ್ಲ. ಇಲ್ಲಿಗೆ ಸಾಂಸ್ಕøತಿಕ ಹಾಗೂ ಪರಿಸರ ಪ್ರವಾಸೋದ್ಯಮ ಮಾತ್ರ ಸೂಕ್ತ ಎಂದು ಹೇಳಿದ ಅವರು, ಮಡಿಕೇರಿ ನಗರವೊಂದರಲ್ಲೆ ಒಂದು ಸಾವಿರಕ್ಕೂ ಅಧಿಕ ಅನಧಿಕೃತ ಹೋಂ ಸ್ಟೇಗಳು ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಹೋಂಸ್ಟೇಗಳು ಅನೈತಿಕ ಚಟುವಟಿಕೆ ಸೇರಿದಂತೆ ಅಕ್ರಮಗಳÀ ಕೇಂದ್ರವಾಗಿವೆ. ಈ ವಿಚಾರ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದರು ಅವುಗಳನ್ನು ಮುಚ್ಚಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲವೆಂದು ನಾಣಯ್ಯ ಆರೋಪಿಸಿದರು. ಕಳೆದ 70 ದಿನಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗಿದ್ದು, ಕಳೆದ 15 ದಿನಗಳಿಂದ ಹೆಚ್ಚಿನ ಮಳೆÉಯಾಗಿ ಆಸ್ತಿಪಾಸ್ತಿ ಹಾನಿಗೊಳಗಾಗಿದೆ. ಈ ಘಟನೆಗಳಿಂದ ಸಂತ್ರಸ್ತರಾದವರಿಗೆ ಮುಂದಿನ ಬದುಕು ಕಟ್ಟಿಕೊಡುವದು ಇಂದಿನ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ಜಿಲ್ಲೆಯ ಮಾಜಿ ಹಾಗೂ ಹಾಲಿ ಶಾಸಕರು, ಜನಪ್ರತಿನಿಧಿಗಳು, ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರನ್ನು ಒಳಗೊಂಡ ರಾಜಕೀಯ ರಹಿತವಾದ ಸಮಿತಿಯೊಂದನ್ನು ರಚಿಸಿ, ಮುಂದಿನ ರೂಪುರೇಷೆಗಳನ್ನು ಸಿದ್ಧಪಡಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಮಡಿಕೇರಿ ಹಾಗೂ ಸುತ್ತಮುತ್ತಲ ಪ್ರದೇಶಗಳ ಹೋಂ ಸ್ಟೇ, ರೆಸಾರ್ಟ್ ಹಾಗೂ ಹೊಟೇಲ್‍ಗಳಲ್ಲಿ ತಂಗಿರುವ ಪ್ರವಾಸಿಗರನ್ನು ಹೊರ ಹೋಗುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಮುಂದಿನ ಒಂದು ತಿಂಗಳವರೆಗೆ ಜಿಲ್ಲೆಗೆ ಯಾವದೇ ಪ್ರವಾಸಿಗರು ಬರುವದನ್ನು ನಿರ್ಬಂಧಿಸಬೇಕು. ಜೊತೆಗೆ ನಗರದ ಹೊರ ವಲಯದಲ್ಲಿರುವ ಮಹೀಂದ್ರ ಸೇರಿದಂತೆ ಎಲ್ಲಾ ರೆಸಾರ್ಟ್‍ಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಬೇಕು. ಇದರಿಂದ ವಾಹನಗಳ ದಟ್ಟಣೆ ಕಡಿಮೆಯಾಗುವ ಮೂಲಕ ಸಂತ್ರಸ್ತರ ಶಿಬಿರಗಳಲ್ಲಿ ಇರುವವರಿಗೆ ಹೆಚ್ಚಿನ ಸೇವೆ ನೀಡಲು ಸಹಾಯವಾಗಲಿದೆ ಎಂದು ಯಂ.ಸಿ. ನಾಣಯ್ಯ ತಿಳಿಸಿದರು.

ಜಿಲ್ಲೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಿದ್ದು, ಇದಕ್ಕೆ ಯಾವದೇ ರಾಜಕೀಯ ಲೇಪ ಬೇಡ ಎಂದು ವಿವಿಧ ರಾಜಕೀಯ ಪಕ್ಷಗಳಿಗೆ ಅವರು ಮನವಿ ಮಾಡಿದರು.

ಗೋಷ್ಠಿಯಲ್ಲಿ ಮೂಡಾ ಮಾಜಿ ಅಧ್ಯಕ್ಷ ಎಸ್.ಐ. ಮುನೀರ್ ಅಹಮ್ಮದ್ ಉಪಸ್ಥಿತರಿದ್ದರು.