ಮಡಿಕೇರಿ, ಜು. 8: ಉಪ್ಪಾರ ಮತ್ತು ಅಂಬಿಗ ಮತ್ತು ಉಪ ಜಾತಿಯವರು ಸೇರಿದಂತೆ ಎಲ್ಲಾ ಹಿಂದುಳಿದ ವರ್ಗಗಳ ಜನರು (ವಿಶ್ವಕರ್ಮ ಅದರ ಉಪ ಜಾತಿಗಳು ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ) ಆರ್ಥಿಕ ಅಭಿವೃದ್ಧಿಗಾಗಿ 2018-19ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಲ್ಲಿ ಸೌಲಭ್ಯ ಪಡೆಯ ಬಯಸುವವರಿಂದ ಅರ್ಜಿ ಆಹ್ವಾನಿಸಲಾಗಿದೆ.
ನಿಗದಿತ ಅರ್ಜಿ ನಮೂನೆಗಳನ್ನು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಲ್ಲಿ ಅಥವಾ ಆಯಾ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಲು ಆಗಸ್ಟ್, 18 ಕೊನೆಯ ದಿನವಾಗಿದೆ.
ಒಂದು ಬಾರಿ ನಿಗಮದ ಯಾವದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವದಿಲ್ಲ.
ಅರ್ಹತೆಗಳು. ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. (ವಿಶ್ವಕರ್ಮ ಅದರ ಉಪ ಜಾತಿ ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ), ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ. 40 ಸಾವಿರಗಳು ಪಟ್ಟಣ ಪ್ರದೇಶದವರಿಗೆ ರೂ. 55 ಸಾವಿರಗಳು ಒಳಗಿರಬೇಕು. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು. ಅರ್ಜಿದಾರರು ಕೆ.ವೈ.ಸಿ. ಬಗ್ಗೆ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಾನ್ ಕಾರ್ಡ್ ದಾಖಲೆಗಳನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕು. (ಅರ್ಜಿದಾರರು ಐ.ಎಫ್.ಎಸ್.ಸಿ. ಕೋಡ್ ಹೊಂದಿರುವ ರಾಷ್ಟ್ರೀಕೃತ/ಗ್ರಾಮೀಣ ಬ್ಯಾಂಕ್ಗಳಲ್ಲಿ ಖಾತೆ ಹೊಂದಿರಬೇಕು.
ಚೈತನ್ಯ ಸಹಾಯಧನ ಯೋಜನೆ: ರಾಷ್ಟ್ರೀಕೃತ ಬ್ಯಾಂಕ್ಗಳ ಸಹಯೋಗದೊಂದಿಗೆ ಹಿಂದುಳಿದ ವರ್ಗಗಳ ಜನರಿಗೆ ವಿವಿಧ ಆರ್ಥಿಕ ಚಟುವಟಿಕೆ ಕೈಗೊಳ್ಳಲು ನಿಗಮದ ಹಾಗೂ ಬ್ಯಾಂಕ್ ಪಾಲಿನ ಮೊತ್ತ ಸೇರಿ ಗರಿಷ್ಠ ರೂ.5 ಲಕ್ಷಗಳವರೆಗೆ ಸೌಲಭ್ಯ,
ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ: ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗಕ್ಕೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಚಟುವಟಿಕೆ ಅನುಸಾರ ಗರಿಷ್ಠ ರೂ.2 ಲಕ್ಷಗಳ ವರೆಗೆ ಆರ್ಥಿಕ ನೆರವು. ಇದರಲ್ಲಿ, ಗರಿಷ್ಠ ಶೇ.15 ರಷ್ಟು ಸಹಾಯಧನ, ಉಳಿಕೆ ಮೊತ್ತ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ.
ಕಿರುಸಾಲ ಯೋಜನೆಯಲ್ಲಿ ಸೌಲಭ್ಯ: ಸ್ವ ಸಹಾಯ ಗುಂಪುಗಳ ಸದಸ್ಯರು ಕೈಗೊಳ್ಳುವ ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರದ ಚಟುವಟಿಕೆಗಳಿಗೆ ಅಂದರೆ, ಹಣ್ಣು, ತರಕಾರಿ, ಹಾಲು, ಹೂ ಮಾರುವವರು, ತಳ್ಳುವ ಗಾಡಿ ವ್ಯಾಪಾರಿಗಳು ಮತ್ತಿತರ ಸಣ್ಣ ಪ್ರಮಾಣದ ವ್ಯಾಪಾರ ಚಟುವಟಿಕೆಗಳಿಗೆ ವಾರ್ಷಿಕ ಶೇಕಡ 4 ರ ಬಡ್ಡಿ ದರದಲ್ಲಿ ಗರಿಷ್ಠ ರೂ.10 ಸಾವಿರ ಸಾಲ ಹಾಗೂ ರೂ.5 ಸಾವಿರ ಸಹಾಯಧನ. ಅರ್ಜಿದಾರರು ಬಿ.ಪಿ.ಎಲ್ ಕುಟುಂಬಕ್ಕೆ ಸೇರಿರಬೇಕು ಹಾಗೂ ಸರ್ಕಾರಿ, ಅರೆ ಸರ್ಕಾರಿ ಉದ್ಯೋಗದಲ್ಲಿ ಇರಬಾರದು.
ಸಾಲ ಮತ್ತು ಸಹಾಯಧನ : ಹಿಂದುಳಿದ ವರ್ಗಗಳ ಸಾಂಪ್ರದಾಯಿಕ ವೃತ್ತಿದಾರರು ಅಥವಾ ವೃತ್ತಿ ಕಸುಬುದಾರರು ತಮ್ಮ ವೃತ್ತಿಯ ಅಭಿವೃದ್ಧಿಗಾಗಿ, ಆಧುನಿಕ ಉಪಕರಣಗಳನ್ನು ಖರೀದಿಸಲು, ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸಲು, ವೃತ್ತಿ ಅನುಸಾರ ಗರಿಷ್ಠ ರೂ. 2 ಲಕ್ಷ ರೂ.ವರೆಗೆ ಆರ್ಥಿಕ ನೆರವು. ಇದರಲ್ಲಿ, ಗರಿಷ್ಠ ಶೇ.15ರಷ್ಟು ಸಹಾಯಧನ, ಉಳಿಕೆ ಮೊತ್ತ ಶೇ.2 ರ ಬಡ್ಡಿದರದಲ್ಲಿ ಸಾಲ ದೊರೆಯಲಿದೆ.
ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ : ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಗಳಾದ ಪೋಸ್ಟ್ಡಾಕ್ರ್ಟಲ್, ಪಿಹೆಚ್.ಡಿ., ಸ್ನಾತಕೋತ್ತರ ಪದವಿ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡಲು ವಾರ್ಷಿಕ ರೂ.3.50 ಲಕ್ಷಗಳಂತೆ, 3 ವರ್ಷಗಳ ಕೋರ್ಸ್ನ ಅವಧಿಗೆ, ಗರಿಷ್ಠ ರೂ.10 ಲಕ್ಷಗಳ ಬಡ್ಡಿರಹಿತ ಸಾಲ ಮಂಜೂರು, ಅರ್ಜಿದಾರರು ಗರಿಷ್ಠ 35 ವರ್ಷಗಳ ವಯೋಮಿತಿಯಲ್ಲಿರಬೇಕು. ವಾರ್ಷಿಕ ವರಮಾನ ರೂ.3.50 ಲಕ್ಷಗಳನ್ನು ಮೀರಿರಬಾರದು ಹಾಗೂ ಅರ್ಹತಾ ಪರೀಕ್ಷೆಗಳಲ್ಲಿ ಶೇ.60ಕಿಂತ ಹೆಚ್ಚಿನ ಅಂಕಗಳಿಸಿರಬೇಕು.
ಕೊಳವೆಬಾವಿ ಯೋಜನೆ: ಪ್ರವರ್ಗ-1, 2ಎ, 3ಎ ಮತ್ತು 3 ಬಿ ಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ಒಂದು ಕೊಳವೆ ಬಾವಿ ಕೊರೆಯಿಸಿ, ಪಂಪ್ ಸೆಟ್ಟು, ಉಪಕರಣಗಳನ್ನು ಸರಬರಾಜು ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರಾವರಿ ಸೌಲಭ್ಯ ಒದಗಿಸಲಾಗುವದು. ಘಟಕ ವೆಚ್ಚ ರೂ. 2.50 ಲಕ್ಷಗಳಲ್ಲಿ ರೂ.2 ಲಕ್ಷಗಳ ಸಹಾಯಧನ ಹಾಗೂ ರೂ.50 ಸಾವಿರಗಳ ಶೇ.4ರ ಬಡ್ಡಿದರದಲ್ಲಿ ಸಾಲ. ಈ ಮೊತ್ತದಲ್ಲಿ ವಿದ್ಯುದ್ದೀಕರಣಕ್ಕೆ ಪ್ರತಿ ಕೊಳವೆ ಬಾವಿಗೆ ರೂ.50 ಸಾವಿರಗಳನ್ನು ವಿದ್ಯುತ್ ಸರಬರಾಜು ಕಂಪನಿಗೆ ಪಾವತಿಸಲಾಗುವದು.
ಸಾಮೂಹಿಕ ನೀರಾವರಿ : ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. ಕನಿಷ್ಟ 3 ಜನರು ಹೊಂದಿರುವ 8 ರಿಂದ 15 ಎಕರೆ ಜಮೀನಿಗೆ ರೂ.4 ಲಕ್ಷಗಳ ವೆಚ್ಚದಲ್ಲಿ 2 ಕೊಳವೆ ಬಾವಿ, 15 ಎಕರೆಗಿಂತ ಹೆಚ್ಚಿನ ಜಮೀನಿಗೆ ರೂ.6 ಲಕ್ಷಗಳ ವೆಚ್ಚದಲ್ಲಿ 3 ಕೊಳವೆಬಾವಿ ಕೊರೆಯಿಸಿ ಪಂಪ್ಸೆಟ್ ಮತ್ತು ಉಪಕರಣಗಳನ್ನು ಸರಬರಾಜು ಮಾಡಿ ನೀರಾವರಿ ಸೌಲಭ್ಯ. ವಿದ್ಯುದ್ದೀಕರಣಕ್ಕೆ ಪ್ರತಿ ಕೊಳವೆ ಬಾವಿಗೆ ರೂ.50 ಸಾವಿರಗಳನ್ನು ವಿದ್ಯುತ್ ಸರಬರಾಜು ಕಂಪನಿಗೆ ಪಾವತಿಸಲಾಗುವದು.
ಮಲೆನಾಡು ಪ್ರದೇಶಗಳಲ್ಲಿ ವೈಯಕ್ತಿಕ ಕೊಳವೆ ಬಾವಿ ಘಟಕ ವೆಚ್ಚದಲ್ಲಿ ತೆರೆದ ಬಾವಿಗಳ ಮಂಜೂರು. ಭೂ ಮಟ್ಟದಲ್ಲಿ ದೊರೆಯುವ ನದಿ ಮತ್ತು ಜಲಾಶಯಗಳ ನೀರಾವರಿ ಸಂಪನ್ಮೂಲಗಳಿಂದ ಏತ ನೀರಾವರಿ ಮೂಲಕ ನೀರಾವರಿ ಸೌಲಭ್ಯ.
ಈ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ಹಿಂದುಳಿದ ವರ್ಗದ ಫಲಾಪೇಕ್ಷಿಗಳು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ರಾಡ್ರಿಗಸ್ ಕಟ್ಟಡದ ಎದುರು, ರೇಸ್ ಕೋರ್ಸ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ ಅಥವಾ ಆಯಾಯ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳ ಕಚೇರಿಯಲ್ಲಿ ಉಚಿತ ಅರ್ಜಿಗಳನ್ನು ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಆಗಸ್ಟ್, 18 ರೊಳಗೆ ಸಲ್ಲಿಸುವದು. ಹೆಚ್ಚಿನ ಮಾಹಿತಿಗೆ 08272-221656 ನ್ನು ಸಂಪರ್ಕಿಸಬಹುದು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.