ಶ್ರೀಮಂಗಲ, ಜು. 3: ಕುಟ್ಟ ಅಂತರ್‍ರಾಜ್ಯದ ಹಳೆ ಚೆಕ್ ಪೋಸ್ಟ್ ಬಳಿ ನಡೆದ ಜೀಪ್ ಅಪಘಾತದಲ್ಲಿ ಕೇರಳದ ತೋಲ್‍ಪಟ್ಟಿ ನಿವಾಸಿ ಶಿವದಾಸನ್ ಅವರ ಪುತ್ರ ಸುದೀಶ್ (32) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕುಟ್ಟ ಸಮೀಪ ಪೂಜೆಕಲ್ಲು ನಿವಾಸಿ ಸಚಿನ್ ಅವರಿಗೆ ಗಂಭೀರ ಗಾಯವಾಗಿದೆ.ಕುಟ್ಟದಿಂದ ತೋಲ್‍ಪಟ್ಟಿಗೆ ರಾತ್ರಿ 10.45ಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಇಲ್ಲಿಯ ಹಳೆ ಚೇಕ್ ಪೋಸ್ಟ್ ಸಮೀಪ ಪೈತ್ ಎಸ್ಟೇಟ್ ಬಳಿ ರಸ್ತೆ ಬದಿಯಲ್ಲಿದ್ದ ಕಲ್ಲಿಗೆ ಡಿಕ್ಕಿಯಾಗಿ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿಯಾಗುವದನ್ನು ತಪ್ಪಿಸಲು ಪ್ರಯತ್ನಿಸಿದಾಗ ಜೀಪು ನಿಯಂತ್ರಣ ತಪ್ಪಿ ರಸ್ತೆ ಬಲ ಬದಿಯಲ್ಲಿದ್ದ ಬೋರ್‍ವೆಲ್‍ಗೆ ಡಿಕ್ಕಿಯಾಗಿ ರಸ್ತೆಯಲ್ಲಿ ಬಲಬದಿಗೆ ಮಗುಚಿಕೊಂಡು ಸುಮಾರು 10 ರಿಂದ 15 ಅಡಿ ದೂರ ಜಾರಿಕೊಂಡು ಹೋಗಿದ್ದು, ಜೀಪನ್ನು ಚಾಲಿಸುತ್ತಿದ್ದ

(ಮೊದಲ ಪುಟದಿಂದ) ಸುದೀಶ್ ಜೀಪಿನ (ಕೆಎ17ಎಂ8542) ಕೆಳಭಾಗಕ್ಕೆ ಸಿಕ್ಕಿಹಾಕಿಕೊಂಡು ಎಡಗಾಲು ಹಾಗೂ ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.ಜೊತೆಯಲ್ಲಿದ್ದ ಪೂಜೆಕಲ್ಲು ನಿವಾಸಿ ಕುಟ್ಟನ್ ಅವರ ಮಗ ಸಚಿನ್(28) ಕೂಡ ಅಪಘಾತದ ಸಂದರ್ಭ ಜೀಪಿನಿಂದ ರಸ್ತೆಗೆ ಎಸೆಯಲ್ಪಟ್ಟು ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದೆ. ಜೀಪಿನಲ್ಲಿದ್ದ ಮತ್ತೊರ್ವ ತೋಲ್‍ಪಟ್ಟಿ ನಿವಾಸಿ ಮುನಿಯಾಂಡಿ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ಗಾಯಾಳು ಸಚಿನ್‍ಗೆ ಕುಟ್ಟ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕೇರಳಕ್ಕೆ ಸಾಗಿಸಲಾಗಿದೆ. ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.