ಮಡಿಕೇರಿ, ಜು. 3: ಇದೊಂದು ಕರುಳು ಹಿಂಡುವ ಹೃದಯ ವಿದ್ರಾವಕವಾದ ದಾರುಣ ಘಟನೆ. ಮಗುವಿಗೆ ಜನ್ಮವಿತ್ತ ಹದಿಹರೆಯದ ಯುವತಿಯೋರ್ವರು ಮರುದಿನವೇ ಇಹಲೋಕ ತ್ಯಜಿಸುವ ಮೂಲಕ ಸಂಬಂಧಿಕರೆಲ್ಲರೂ ಶೋಕದಲ್ಲಿ ಮುಳುಗುವಂತಾಗಿದೆ.ಮೂರ್ನಾಡು ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕಿಯಾಗಿದ್ದ ವೀರಾಜಪೇಟೆಯ ಅನ್ನಡಿಯಂಡ ಕಾರ್ಯಪ್ಪ ಅವರ ಪತ್ನಿ ಲಾಸ್ಯ (26) (ತಾಮನೆ ತಿರ್‍ಕಚೇರಿರ) ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ನಿನ್ನೆ ಬೆಳಿಗ್ಗೆ ಅವರು ವೀರಾಜಪೇಟೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೆಣ್ಣುಮಗುವಿಗೆ ಜನ್ಮವಿತ್ತಿದ್ದರು. ಬೆಳಿಗ್ಗೆ 9.15ರ ಸುಮಾರಿಗೆ ಹೆರಿಗೆಯಾಗಿದ್ದು, ನಂತರ ಇವರು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದರೆನ್ನಲಾಗಿದೆ.

ಅಪರಾಹ್ನದ ನಂತರ ಇವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಲಾಸ್ಯ ಪುಟ್ಟ ಕಂದಮ್ಮಳನ್ನು ಬಿಟ್ಟು ತಾ. 3 ರಂದು ಮುಂಜಾನೆ ಅಸುನೀಗಿದ್ದಾರೆ. ಈ ಘಟನೆ ಸಂಬಂಧಿಕರನ್ನು ಕಂಗೆಡಿಸುವಂತೆ ಮಾಡಿದೆ.ಅಂತ್ಯಕ್ರಿಯೆ ಸಂಜೆ ವೀರಾಜಪೇಟೆಯಲ್ಲಿ ನೆರವೇರಿತು. ಮೃತೆ ಲಾಸ್ಯ ಅವರ ತಂದೆ ಕೂಡ ಒಂದೆರಡು ತಿಂಗಳ ಹಿಂದೆ ಸಾವಿಗೀಡಾಗಿದ್ದು, ದುರಂತ ಘಟನೆಗಳ ಈ ಸರಮಾಲೆ ಕರುಳು ಹಿಂಡುವಂತೆ ಮಾಡಿದೆ.