ಮಡಿಕೇರಿ, ಜೂ. 2: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರಾರು ಗ್ರಾಮೀಣ ಅಂಚೆ ನೌಕರರು ತಮ್ಮ ನಿರಂತರ ಪ್ರತಿಭಟನೆಯ ಭಾಗವಾಗಿ ನಿನ್ನೆ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಗ್ರಾಮೀಣ ಅಂಚೆ ನೌಕರರು ಪ್ರಮುಖವಾಗಿ ಎಐಜಿಡಿಎಸ್ ಸಮಿತಿ ನೀಡಿರುವ ವರದಿಯನ್ನು ಸೇರ್ಪಡೆ ಮಾಡಿ ಅದನ್ನು ಜಾರಿಗೊಳಿಸಬೇಕು. ಕನಿಷ್ಟ 8 ಗಂಟೆಗಳ ಕೆಲಸ ಖಾಯಂ ಗೊಳಿಸಬೇಕು. ದೆಹಲಿ ಮತ್ತು ಮದ್ರಾಸ್ ನ್ಯಾಯಾಲಯದ ತೀರ್ಮಾನದಂತೆ ಜಿಡಿಎಸ್ ನೌಕರರಿಗೆ ಪಿಂಚಣಿ ನೀಡಬೇಕು. ಟಾರ್ಗೆಟ್ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ತಮ್ಮ ಬೇಡಿಕೆಗಳನ್ನು ಸರಕಾರ ಪರಿಶೀಲಿಸಿ ಈಡೇರಿಸಿದರೆ ಸೇವೆಗೆ ಮರಳುತ್ತೇವೆ, ಇಲ್ಲವಾದಲ್ಲಿ ಮುಷ್ಕರ ಮುಂದುವರೆಸುವದು ಅನಿವಾರ್ಯ ವಾಗಲಿದೆ. ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದರೂ ತಮ್ಮ ಬೇಡಿಕೆಗಳು ಈಡೇರಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಸಂಘದ ಕೊಡಗು ಜಿಲ್ಲಾ ಕಾರ್ಯದರ್ಶಿ ಬಿ.ಎಂ. ಮಂಜುನಾಥ್, ಪ್ರಮುಖರಾದ ಸತೀಶ್ ಕೆ.ಹೆಚ್., ಸುಶೀಲ, ಶಿವಶಂಕರ್ ಹಾಗೂ ಗ್ರಾಮೀಣ ಅಂಚೆ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.