ವೀರಾಜಪೇಟೆ, ಮೇ 26: ವೀರಾಜಪೇಟೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪೂರ್ವ ವಿದ್ಯಾರ್ಥಿಗಳ ಸಂಘದ ವಾರ್ಷಿಕ “ಸ್ನೇಹಮಿಲನ” ಕಾರ್ಯಕ್ರಮ ತಾ. 28ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕುಂಬೇರ ಎಸ್.ಅಯ್ಯಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬೆಳಿಗ್ಗೆ 10:30ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಂಸ್ಥೆಯ ಪೂರ್ವ ವಿದ್ಯಾರ್ಥಿ ಹಾಗೂ ಭಾರತೀಯ ಸೇನಾ ಪಡೆಯ ನಿವೃತ್ತ ಅಧಿಕಾರಿ ಬ್ರಿಗೇಡಿಯರ್ ಮಂಡೇಪಂಡ ಎನ್. ಕುಟ್ಟಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಎರಡು ಶತಮಾನಗಳ ಇತಿಹಾಸ ಕಂಡಿರುವ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅತಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ತಮ್ಮ ವೈಯಕ್ತಿಕ ಬೆಳವಣಿಗೆಯಲ್ಲಿ ಸಂಸ್ಥೆಯ ಪಾತ್ರದ ಬಗೆಗಿನ ಸವಿ ನೆನಪುಗಳ ಮೆಲುಕು ಹಾಕುವದು ಮತ್ತು ಪೂರ್ವ ವಿದ್ಯಾರ್ಥಿಗಳ ಒಗ್ಗೂಡುವಿಕೆ ಮಿಲನದ ಉದ್ದೇಶವಾಗಿದೆ. ವರ್ಷಗಳ ಹಿಂದೆ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದವರು ವಿವಿಧ ಕಾರಣಗಳಿಂದಾಗಿ ಸಂಘದ ಸದಸ್ಯತ್ವ ಹೊಂದಿರದಿದ್ದಲ್ಲಿ ಕಾರ್ಯಕ್ರಮದಂದು ಸದಸ್ಯತ್ವ ಪಡೆಯಬಹುದಾಗಿಯೂ ತಿಳಿಸಿದರು. ಈ ಬಗೆಗಿನ ಹೆಚ್ಚಿನ ಮಾಹಿತಿಗಾಗಿ 9449554890 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿ ತಿಳಿಸಿದ್ದಾರೆ.